ADVERTISEMENT

ಗಾಂಧಿ ರಾಷ್ಟ್ರಪಿತರಲ್ಲ, ನೆಹರು ಮೊದಲ ಪ್ರಧಾನಿಯಲ್ಲ: ಧರ್ಮ ಸಂಸತ್‌

ಸಂಜಯ ಪಾಂಡೆ
Published 31 ಜನವರಿ 2022, 4:19 IST
Last Updated 31 ಜನವರಿ 2022, 4:19 IST
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ ಸಮಾವೇಶ
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ ಸಮಾವೇಶ   

ಪ್ರಯಾಗರಾಜ್‌: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 'ಧರ್ಮ ಸಂಸತ್‌' ನಡೆಯುತ್ತಿದ್ದು, ಭಾರತವನ್ನು 'ಹಿಂದೂ ರಾಷ್ಟ್ರ' ಮಾಡಲು ಕರೆ ನೀಡಲಾಗಿದೆ. ಇದೇ ವೇಳೆ, ಮಹಾತ್ಮ ಗಾಂಧಿಯನ್ನು 'ರಾಷ್ಟ್ರಪಿತ' ಎಂದು, ಪಂಡಿತ್ ಜವಾಹರಲಾಲ್ ನೆಹರು ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಒಪ್ಪಲು ನಿರಾಕರಿಸಲಾಗಿದೆ.

ಸುಮೇರು ಪೀಠದ ಶಂಕರಾಚಾರ್ಯ ಸ್ವಾಮಿ, ನರೇಂದ್ರಾನಂದ ಸರಸ್ವತಿ ಮತ್ತಿತರರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸುವುದು, ಹರಿದ್ವಾರ ಧರ್ಮ ಸಂಸತ್‌ನಲ್ಲಿ ಧ್ವೇಷ ಭಾಷಣ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜಿತೇಂದ್ರ ನಾರಾಯಣ್ ತ್ಯಾಗಿ ಅಲಿಯಾಸ್ ವಸೀಂ ರಿಜ್ವಿ ಅವರನ್ನು ಬಿಡುಗಡೆ ಮಾಡುವುದು, ಮತಾಂತರದಲ್ಲಿ ತೊಡಗಿರುವವರಿಗೆ ಮರಣದಂಡನೆ ವಿಧಿಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.

‘ಭಾರತದಂತಹ ದೇಶದಲ್ಲಿ ರಾಷ್ಟ್ರಪುತ್ರ (ರಾಷ್ಟ್ರದ ಮಗ) ಆಗಿರಬಹುದೇ ಹೊರತು, ಯಾರೂ ‘ರಾಷ್ಟ್ರಪಿತ’ ಆಗಲಾರರು’ ಎಂದು ನರೇಂದ್ರಾನಂದ ಸರಸ್ವತಿ ತಮ್ಮ ಭಾಷಣದಲ್ಲಿ ಹೇಳಿದರು.

ADVERTISEMENT

‘15 ದೇಶಗಳ ಬೆಂಬಲ’ ಹೊಂದಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಘೋಷಿಸಬೇಕು. ದೇಶವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ಬೋಸ್ ಅದಾಗಲೇ ಭಾರತದ ಪ್ರಧಾನಿಯಾಗಿದ್ದರು’ ಎಂದು ಅವರು ಪ್ರತಿಪಾದಿಸಿದರು.

ನರಸಿಂಹಾನಂದ ಮತ್ತು ತ್ಯಾಗಿ ಅವರನ್ನು ಬಿಡುಗಡೆ ಮಾಡದಿದ್ದಲ್ಲಿ ರಾಷ್ಟ್ರವ್ಯಾಪಿ ಹೋರಾಟ ನಡೆಸುವುದಾಗಿ ಧರ್ಮ ಸಂಸತ್‌ನಲ್ಲಿ ಭಾಗವಹಿಸಿದ್ದ ಧರ್ಮಗುರುಗಳು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.