ADVERTISEMENT

ಎಟುಕದ ದ್ರಾಕ್ಷಿ ಹುಳಿ: ಪ್ರಿಯಾಂಕಾಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:29 IST
Last Updated 30 ಜೂನ್ 2019, 19:29 IST
ಆದಿತ್ಯನಾಥ
ಆದಿತ್ಯನಾಥ   

ಲಖನೌ: ‘ಉತ್ತರಪ್ರದೇಶದಲ್ಲಿ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಹೇಳಿರುವುದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಕೈಗೆಟುಕದ ದ್ರಾಕ್ಷಿ ಹುಳಿ’ ಎಂದು ವ್ಯಂಗ್ಯವಾಡಿದ್ದಾರೆ.

‘ಪ್ರಿಯಾಂಕಾ ಅವರ ಪಕ್ಷದ ಅಧ್ಯಕ್ಷರೇ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ, ಅವರು ಈಗ ಚರ್ಚೆಯಲ್ಲಿರಲುದೆಹಲಿಯಲ್ಲಿಯೋ ಅಥವಾ ಇಟಲಿಯಲ್ಲಿಯೋ ಕುಳಿತು ಏನಾದರೂ ಹೇಳಲೇಬೇಕಾಗಿದೆ‘ ಎಂದು ಪ್ರತಿಕ್ರಿಯಿಸಿದ್ದಾರೆ.

ಹುಳಿದ್ರಾಕ್ಷಿಯ ಉಪಮೆಯನ್ನು ನೀಡಿದಮುಖ್ಯಮಂತ್ರಿ ಅವರು, ‘ಪ್ರಿಯಾಂಕಾ ಗಾಂಧಿ ಅವರು ತಮ್ಮ ಸೋದರ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗೆಲ್ಲುವಂತೆ ನೋಡಿಕೊಳ್ಳಲೂ ವಿಫಲರಾದರು’ ಎಂದು ಟೀಕಿಸಿದ್ದಾರೆ.

ADVERTISEMENT

ಶನಿವಾರ ತಮ್ಮ ಟ್ವಿಟರ್‌ ಸಂದೇಶದಲ್ಲಿ ಯೋಗಿ ಅವರನ್ನು ಟೀಕಿಸಿದ್ದ ಪ್ರಿಯಾಂಕಾ ಗಾಂಧಿ, ‘ರಾಜ್ಯದಲ್ಲಿ ಕ್ರಿಮಿನಲ್‌ಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಅಪರಾಧ ಘಟನೆಗಳು ಒಂದಲ್ಲ, ಒಂದು ಕಡೆ ನಡೆಯುತ್ತಿವೆ. ಸರ್ಕಾರ ಏನೂ ಆಗಿಲ್ಲ ಎಂಬಂತೆ ಮೌನವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಸಾಮೂಹಿಕ ವಲಸೆ ಇಲ್ಲ:ಇನ್ನೊಂದು ಬೆಳವಣಿಗೆಯಲ್ಲಿ ರಾಜ್ಯದ ಮೀರಠ್‌ನಲ್ಲಿ ಕೆಲ ಹಿಂದೂ ಕುಟುಂಬ ಗಳು ವಲಸೆ ಹೋಗುತ್ತಿವೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಯೋಗಿ ಅವರು, ‘ಯಾರು ವಲಸೆ ಹೋಗುತ್ತಾರೆ? ಬಿಜೆಪಿ ಅಧಿಕಾರದಲ್ಲಿ ಇದೆ. ನಾವಿರುವವರೆಗೂ ಯಾವುದೇ ವಲಸೆ ಇರುವುದಿಲ್ಲ’ ಎಂದು ಪ್ರತಿಪಾದಿಸಿದರು.

ಮೀರಠ್‌ ನಗರದ ಪ್ರಹ್ಲಾದನಗರ ಬಡಾವಣೆಯಲ್ಲಿ ಮುಸಲ್ಮಾನರ ಬೆದರಿಕೆಯಿಂದಾಗಿ ಹಿಂದೂಗಳ ಅನೇಕ ಕುಟುಂಬಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿವೆ ಎಂಬ ವರದಿಗಳತ್ತ ಸುದ್ದಿಗೋಷ್ಠಿಯಲ್ಲಿ ಗಮನಸಳೆದಾಗ ಮುಖ್ಯಮಂತ್ರಿ ಈ ಪ್ರತಿಕ್ರಿಯೆಯನ್ನು ನೀಡಿದರು.

ಹಿಂದೂ ಕುಟುಂಬಗಳು ಸಾಮೂಹಿಕವಾಗಿ ವಲಸೆ ಹೋಗುತ್ತಿವೆ ಎಂಬ ವರದಿಗಳು ವಿವಾದಕ್ಕೆ ಕಾರಣವಾಗಿದ್ದವು. ಹಿಂದೂ ಸಂಘಟನೆಗಳು ಕಟುವಾಗಿ ಖಂಡಿಸಿದ್ದವು.

‘ಬಿಜೆಪಿ ಆಡಳಿತದಲ್ಲಿ ಅಂಥ ಯಾವುದೇ ಬೆಳವಣಿಗೆ ಇಲ್ಲ. ಈ ಬಗ್ಗೆ ಗಮನಿಸಲುಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸಂಗತಿ ಪರಿಶೀಲಿಸಿದ್ದಾರೆ. ಯಾವುದೇ ಸಮುದಾಯದಿಂದ ಬೆದರಿಕೆ ಇಲ್ಲ, ಸಾಮೂಹಿಕ ವಲಸೆಯೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಶಾಮ್ಲಿ ಜಿಲ್ಲೆಯ ಕೈರಾನಾ ಪ್ರದೇಶದಿಂದ ಹಿಂದೂ ಕುಟುಂಬಗಳ ವಲಸೆ ಹೋಗುತ್ತಿವೆ ಎಂಬುದು ಹಿಂದೆಯೂ ವಿವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.