ADVERTISEMENT

ಧರ್ಮಕ್ಕಾಗಿ ಬಡಿದಾಡುವುದು ಭಾರತಕ್ಕೆ ಒಳ್ಳೆಯದಲ್ಲ: ಫಾರೂಕ್ ಅಬ್ದುಲ್ಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2023, 7:09 IST
Last Updated 2 ಆಗಸ್ಟ್ 2023, 7:09 IST
ಹರಿಯಾಣದ ನೂಹ್ ಜಿಲ್ಲೆಯಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ಪೊಲೀಸರದ್ದೂ ಸೇರಿದಂತೆ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ
ಹರಿಯಾಣದ ನೂಹ್ ಜಿಲ್ಲೆಯಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ಪೊಲೀಸರದ್ದೂ ಸೇರಿದಂತೆ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ   ಪಿಟಿಐ ಚಿತ್ರ

ನವದೆಹಲಿ: ‘ಭಾರತ ಎಲ್ಲಾ ಧರ್ಮದವರಿಗೂ ಸೇರಿದ ರಾಷ್ಟ್ರ. ಇಲ್ಲಿ ಧರ್ಮಕ್ಕಾಗಿ ಬಡಿದಾಡಿಕೊಳ್ಳುವುದು ದೇಶಕ್ಕೆ ಒಳ್ಳೆಯದಲ್ಲ’ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದ ಘಟನೆ ಆಘಾತಕಾರಿ. ಭಾರತದಲ್ಲಿರುವ ಎಲ್ಲಾ ಧರ್ಮದವರಿಗೂ ಅಸ್ತಿತ್ವ ಕಂಡುಕೊಳ್ಳಲು ತಮ್ಮದೇ ಆದ ಹಕ್ಕುಗಳಿವೆ’ ಎಂದಿದ್ದಾರೆ.

ಹರಿಯಾಣದ ಸಂಸದ ದೀಪೆಂದರ್ ಎಸ್. ಹೂಡಾ ಘಟನೆ ಕುರಿತು ಪ್ರತಿಕ್ರಿಯಿಸಿ, ‘ಇದು ಸಂಪೂರ್ಣವಾಗಿ ಆಡಳಿತದ ವೈಫಲ್ಯ. ಸಮಯಕ್ಕೆ ಸರಿಯಾಗಿ ಸೂಕ್ತ ಕ್ರಮ ಜರುಗಿಸಿದ್ದರೆ ಹಾಗೂ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದರೆ ಗಲಭೆಯನ್ನು ನಿಯಂತ್ರಿಸಬಹುದಿತ್ತು. ಪರಿಸ್ಥಿತಿ ಇಷ್ಟು ಗಂಭೀರವಾಗುತ್ತಿರಲಿಲ್ಲ’ ಎಂದಿದ್ದಾರೆ.

ADVERTISEMENT

ಗಲಭೆ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ, ‘ಯಾತ್ರೆಯ ಸ್ವರೂಪ ಕುರಿತು ಅದರ ಆಯೋಜಕರು ಸಂಪೂರ್ಣ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿರಲಿಲ್ಲ. ಹೀಗಾಗಿ ಈ ಗಲಭೆ ನಡೆದಿದೆ. ಕೋಮುಗಲಭೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಗಲಭೆ ವ್ಯಾಪಿಸದಂತೆ ಕಟ್ಟೆಚ್ಚರ; ಪೆಟ್ರೊಲ್ ಚಿಲ್ಲರೆ ಮಾರಾಟಕ್ಕೆ ನಿಷೇಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.