ADVERTISEMENT

ಬುಡಕಟ್ಟು ಸಮುದಾಯದವರ ವಿರುದ್ಧದ 48 ಸಾವಿರ ಪ್ರಕರಣ ರದ್ದು; ಒಡಿಶಾ ಸಿಎಂ ಘೋಷಣೆ

ಪಿಟಿಐ
Published 21 ಫೆಬ್ರುವರಿ 2024, 11:10 IST
Last Updated 21 ಫೆಬ್ರುವರಿ 2024, 11:10 IST
   

ಭುವನೇಶ್ವರ: ಬುಡಕಟ್ಟು ಸಮುದಾಯದವರ ವಿರುದ್ಧ ಕ್ಷುಲ್ಲಕ ಕಾರಣಗಳಿಗೆ ದಾಖಲಾಗಿರುವ ಸುಮಾರು 48,018 ಪ್ರಕರಣಗಳನ್ನು ರದ್ದುಪಡಿಸಲು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬುಧವಾರ ಆದೇಶಿಸಿದ್ದಾರೆ.

ಹೆಚ್ಚಿನ ಪ್ರಕರಣಗಳು ಅಬಕಾರಿ, ಗೃಹ, ಅರಣ್ಯ ಮತ್ತು ಪರಿಸರ ಇಲಾಖೆಗಳಿಗೆ ಸಂಬಂಧಿಸಿದವುಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಗ್ರವಾಗಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣಗಳನ್ನು ರದ್ದುಪಡಿಸಲು ನಿರ್ಧರಿಸಲಾಯಿತು. ರದ್ದುಪಡಿಸಲು ತೀರ್ಮಾನಿಸಿರುವ ಒಟ್ಟು ಪ್ರಕರಣಗಳಲ್ಲಿ 36,581, ಅಬಕಾರಿ ಇಲಾಖೆ ಅಡಿಯಲ್ಲಿ ಬರುತ್ತವೆ. 9,846 ಪ್ರಕರಣಗಳು ಗೃಹ ಹಾಗೂ 1,591 ಪ್ರಕರಣಗಳು ಅರಣ್ಯ ಮತ್ತು ಪರಿಸರ ಇಲಾಖೆಗೆ ಸಂಬಂಧಿಸಿದವುಗಳಾಗಿವೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ADVERTISEMENT

ಇಷ್ಟು ಪ್ರಕರಣಗಳನ್ನು ರದ್ದುಪಡಿಸುವುದರಿಂದ ನ್ಯಾಯಾಲಯಗಳು ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಡಿಶಾದ ಒಟ್ಟು ಜನಸಂಖ್ಯೆಯಲ್ಲಿ ಶೇ 23 ರಷ್ಟು ಬುಡಕಟ್ಟು ಸಮುದಾಯದವರಿದ್ದಾರೆ. ಹೀಗಾಗಿ, ಸರ್ಕಾರ ಕೈಗೊಂಡಿರುವ ಈ ನಿರ್ಧಾರವು ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ದೃಷ್ಟಿಯಿಂದ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.