
ಭುವನೇಶ್ವರ: ಯುವತಿಯೊಬ್ಬರ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣದ ಒಡಿಶಾದ ಜಗತಿಸಂಗ್ಪುರ ಜಿಲ್ಲೆಯಲ್ಲಿ ವರದಿಯಾಗಿದೆ.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅಪಹರಣ, ಅತ್ಯಾಚಾರ ಹಾಗೂ ಕೊಲೆ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಬ್ಬ ಪ್ರಿಯತಮ; ಇನ್ನೊಬ್ಬ ನೆರವಾಗುತ್ತೇನೆ ಎಂದವ
ಪ್ರಕರಣ ಸಂಬಂಧ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅತ್ಯಾಚಾರವೆಸಗಿದ ಆರೋಪಿಗಳಲ್ಲಿ ಒಬ್ಬ ಆಕೆಯ ಪ್ರಿಯತಮ. ಇನ್ನೊಬ್ಬ ಸಹಾಯ ಮಾಡುತ್ತೇನೆ ಎಂದು ಸಂತ್ರಸ್ತೆಯನ್ನು ನಂಬಿಸಿದ್ದವ.
'23 ವರ್ಷದ ಯುವತಿಯು ಆರೋಪಿಗಳಲ್ಲಿ ಒಬ್ಬನನ್ನು ಪ್ರೀತಿಸುತ್ತಿದ್ದಳು. ಆತ, ದೇವಾಲಯದಲ್ಲಿ ಮದುವೆಯಾಗುವುದಾಗಿ ನಂಬಿಸಿ, ಮನೆ ಬಿಟ್ಟು ಬರುವಂತೆ ಹೇಳಿದ್ದ. ಅದರಂತೆ ಯುವತಿಯು ಫೆಬ್ರುವರಿ 22ರಂದು ಮನೆ ಬಿಟ್ಟು ಬಂದಿದ್ದಳು. ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋದ ಆರೋಪಿ, ಅತ್ಯಾಚಾರವೆಸಗಿ, ರಹಾಮ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದ' ಎಂದು ಜಗತಿಸಂಗ್ಪುರ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಕುಮಾರ್ ವರ್ಮಾ ಹೇಳಿದ್ದಾರೆ.
ಮುಂದುವರಿದು, 'ಸಂತ್ರಸ್ತೆಯು ಬಸ್ ನಿಲ್ದಾಣದಲ್ಲೇ ಕಾಯುತ್ತಿದ್ದಾಗ ಬೈಕ್ನಲ್ಲಿ ಬಂದ ಮತ್ತೊಬ್ಬ ಆರೋಪಿ, ಆಕೆಯ ಅಸಹಾಯಕ ಸ್ಥಿತಿಯನ್ನು ಕಂಡು ಸಹಾಯ ಮಾಡುವುದಾಗಿ ನಂಬಿಸಿದ್ದಾನೆ. ನಂತರ, ಪರದೀಪ್ ಪಟ್ಟಣದಲ್ಲಿ ತಾನು ವಾಸವಿರುವ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ, ಛಾವಣಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ, ಆಕೆಯನ್ನು ಕಟ್ಟದ ಮೇಲಿಂದ ಎಸೆದು ಕೊಲೆ ಮಾಡಿದ್ದಾನೆ. ಈತ ಜಾರ್ಖಂಡ್ ಮೂಲದವನು' ಎಂದು ಮಾಹಿತಿ ನೀಡಿದ್ದಾರೆ.
ಮರುದಿನ ಬೆಳಿಗ್ಗೆ ಶವ ಪತ್ತೆಯಾಗಿತ್ತು. ಪೊಲೀಸರು, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ, ಮೃತ ಯುವತಿಯ ಸಹೋದರ, ಅತ್ಯಾಚಾರ ಹಾಗೂ ಕೊಲೆ ಆರೋಪದಡಿ ಪರದೀಪ್ ಪೊಲೀಸ್ ಠಾಣೆಗೆ ಫೆಬ್ರುವರಿ 25ರಂದು ದೂರು ನೀಡಿದ್ದರು. ಅದಕ್ಕೂ ಮುನ್ನ, ಫೆಬ್ರುವರಿ 22ರ ಸಂಜೆಯೇ ತಿರ್ಟೊಲ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು.
ಈ ಪ್ರಕರಣವನ್ನು ಮಾಜಿ ಮುಖ್ಯಮಂತ್ರಿ, ಬಿಜೆಡಿ ಮುಖ್ಯಸ್ಥ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ನವೀನ್ ಪಟ್ನಾಯಕ್ ಖಂಡಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರಿಗೆ ಸಾಧ್ಯವಾದಷ್ಟು ಬೇಗ ನ್ಯಾಯ ಸಿಗುವಂತಾಗಬೇಕು ಎಂದು ಒತ್ತಾಯಿಸಿರುವ ಅವರು, ಕಾನೂನು – ಸುವ್ಯವಸ್ಥೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.