ADVERTISEMENT

ಕಾಂಗ್ರೆಸ್‌ನ ಕೆಲವು ಸಂಸದರ ವರ್ತನೆ ಕಪ್ಪು ಚುಕ್ಕೆ: ಓಂಬಿರ್ಲಾ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 19:51 IST
Last Updated 5 ಫೆಬ್ರುವರಿ 2026, 19:51 IST
ಓಂ ಬಿರ್ಲಾ
ಓಂ ಬಿರ್ಲಾ   

ನವದೆಹಲಿ: ‘ಸದನದ ನಾಯಕರು ಲೋಕಸಭೆಯಲ್ಲಿ ಮಾತನಾಡಿರುವುದು ಸೂಕ್ತವಲ್ಲ. ಆದರೆ, ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗುವ ಮಾಹಿತಿ ಇದ್ದ ಕಾರಣಕ್ಕೆ ಸದನಕ್ಕೆ ಬಾರದಂತೆ ಮೋದಿ ಅವರಿಗೆ ಕೋರಿದ್ದೆ. ನನ್ನ ವಿನಂತಿಗೆ ಮನ್ನಣೆ ನೀಡಿದ್ದಕ್ಕೆ ಅವರಿಗೆ ಕೃತಜ್ಞನಾಗಿದ್ದೇನೆ’ ಎಂದು ಓಂಬಿರ್ಲಾ ಹೇಳಿದರು.

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧದ ಪುಸ್ತಕಗಳನ್ನು ಹಿಡಿದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿರುವ ಮಾತುಗಳ ಬಗ್ಗೆ ದೂರು ನೀಡಲು ಕಾಂಗ್ರೆಸ್ ಸಂಸದರು ತಮ್ಮ ಕಚೇರಿಗೆ ಪ್ರವೇಶಿಸಿದ್ದನ್ನು ಉಲ್ಲೇಖಿಸಿದ ಅವರು, ‘ಕಾಂಗ್ರೆಸ್‌ನ ಕೆಲವು ಸಂಸದರ ನಡವಳಿಕೆ ಸ್ವೀಕಾರಾರ್ಹವಲ್ಲ. ಅವರ ನಡವಳಿಕೆ ಕಪ್ಪು ಚುಕ್ಕೆ’ ಎಂದು ಹೇಳಿದರು.

ಕೆಲವು ಸಂಸದರು ಮೇಜಿನ ಮೇಲೆ ಬಡಿದು ಕೋಪದಿಂದ ಮಾತನಾಡುತ್ತಾ, ದುಬೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಹುಲ್‌ ಅವರಿಗೆ ಮಾತನಾಡಲು ಅವಕಾಶ ನೀಡದಿದ್ದರೆ, ಪ್ರಧಾನಿ ಸದನದಲ್ಲಿ ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು ಎಂದರು.

ADVERTISEMENT

ಸ್ಪೀಕರ್‌ ಹಿಂದೆ ಅಡಗಿ ಕೂತ ಮೋದಿ: ಪ್ರಿಯಾಂಕಾ

‘ಪ್ರಧಾನಿ ಮೋದಿ ಅವರಿಗೆ ಸದನಕ್ಕೆ ಬರುವ ಧೈರ್ಯವಿಲ್ಲದ ಕಾರಣ ಸ್ಪೀಕರ್ ಹಿಂದೆ ಅಡಗಿಕೊಂಡಿದ್ದಾರೆ’ ಎಂದು ಕಾಂಗ್ರೆಸ್‌ ಸಂಸದೆ ‍‍ಪ್ರಿಯಾಂಕಾ ಗಾಂಧಿ ವಾದ್ರಾ ಛೇಡಿಸಿದರು.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಲೋಕಸಭಾಧ್ಯಕ್ಷರ ಹೇಳಿಕೆ ಸಂಪೂರ್ಣ ಸುಳ್ಳು. ಪ್ರಧಾನಿ ಅವರಿಗೆ ಸದನಕ್ಕೆ ಬರುವ ಧೈರ್ಯವಿಲ್ಲದ ಕಾರಣ ಸರ್ಕಾರವು ಸಭಾಧ್ಯಕ್ಷರ ಮೂಲಕ ಇಂತಹ ಹೇಳಿಕೆಗಳನ್ನು ಕೊಡಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.