ADVERTISEMENT

ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಓಮೈಕ್ರಾನ್ ಉಪ ತಳಿಗಳು ಕಾರಣ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2022, 8:29 IST
Last Updated 6 ಆಗಸ್ಟ್ 2022, 8:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣಗಳ ಹರಡುವಿಕೆಗೆ ಓಮೈಕ್ರಾನ್ ಹಾಗೂ ಅದರ ಉಪ ತಳಿಗಳು ಕಾರಣವಾಗುತ್ತಿವೆ ಎಂದು ‘ಭಾರತೀಯ ಸಾರ್ಸ್–ಕೊವ್–2 ಜೀನೋಮಿಕ್ಸ್ ಒಕ್ಕೂಟ (ಐಎನ್‌ಎಸ್‌ಎಸಿಒಜಿ)’ ವಾರದ ಸಭೆಯಲ್ಲಿ ಅಭಿಪ್ರಾಯಪಟ್ಟಿದೆ.

ಕೊರೊನಾ ವೈರಸ್‌ನ ವಿವಿಧ ಉಪ ತಳಿಗಳ ಪರಾಮರ್ಶೆ ನಡೆಸಿದ ಬಳಿಕ ಒಕ್ಕೂಟವು ಈ ಅಭಿಪ್ರಾಯಕ್ಕೆ ಬಂದಿದೆ.

ಪ್ರಸ್ತುತ ಓಮೈಕ್ರಾನ್ ಮತ್ತು ಅದರ ಉಪ ತಳಿಗಳು ಮಾತ್ರ ದೇಶದಲ್ಲಿ ಹರಡುತ್ತಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

‘ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಮರಣ ಪ್ರಮಾಣ ಕಡಿಮೆಯಾಗಿದೆ’ ಎಂದು ಮೂಲಗಳು ಹೇಳಿವೆ.

‘ನಾವು ಪ್ರತಿ ವಾರ ದತ್ತಾಂಶಗಳನ್ನು ಪರಿಶೀಲಿಸುತ್ತೇವೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿಲ್ಲ. ಆತಂಕಪಡುವ ಅಗತ್ಯವಿಲ್ಲ’ ಎಂದು ಐಎನ್‌ಎಸ್‌ಎಸಿಒಜಿ ಮೂಲಗಳು ಹೇಳಿವೆ.

ಓಮೈಕ್ರಾನ್‌ ಉಪ ತಳಿಗಳಿಗೆ ಸಂಬಂಧಿಸಿ ಐಎನ್‌ಎಸ್‌ಎಸಿಒಜಿ ಶೀಘ್ರದಲ್ಲೇ ಪ್ರಕಟಣೆ ಬಿಡುಗಡೆ ಮಾಡಲಿದೆ ಎಂದೂ ಮೂಲಗಳು ತಿಳಿಸಿವೆ.

ಶನಿವಾರ ಬೆಳಗ್ಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 19,406 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಶುಕ್ರವಾರಕ್ಕೆ ಹೋಲಿಸಿದರೆ (20,551 ಹೊಸ ಪ್ರಕರಣ, 70 ಸಾವು) ಇದು ತುಸು ಕಡಿಮೆಯಾದರೂ ಕಳೆದ ಕೆಲವು ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸದ್ಯ ದೇಶದಲ್ಲಿ 1,34,793 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇಕಡ 4.96 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.