ರಾಂಚಿ: ಜಾರ್ಖಾಂಡ್ ವಿಧಾನಸಭೆಗೆ ಶನಿವಾರ ನಡೆದ ಎರಡನೇ ಹಂತದ ಮತದಾನದ ಸಂದರ್ಭದಲ್ಲಿ, ನಕ್ಸಲ್ ಪೀಡಿತ ಗುಮ್ಲಾ ಜಿಲ್ಲೆಯ ಸಿಸಾಯ್ ಕ್ಷೇತ್ರದಲ್ಲಿ ನಡೆದ ಹಿಂಸಾಚಾರದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ವಿಧಾನಸಭೆಗೆ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟಾರೆ 63.36% ಮತದಾನ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ.
ಸಿಸಾಯ್ ಕ್ಷೇತ್ರದ ಮತದಾನ ಕೇಂದ್ರದ ಹೊರಗೆ ಸ್ಥಳೀಯರು ಪೊಲೀಸರೊಂದಿಗೆ ಘರ್ಷಣೆಗೆ ಮುಂದಾಗಿದ್ದರು. ಆಕ್ರೋಶಗೊಂಡ ಜನರು, ಕ್ಷೀಪ್ರ ಕಾರ್ಯ ಪಡೆಯ (ಆರ್ಎಎಫ್) ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಮುಂದಾಗುತ್ತಿದ್ದಂತೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದು, ಪೊಲೀಸ್, ಪತ್ರಕರ್ತ ಸೇರಿ ಮೂವರು ಗಾಯಗೊಂಡಿದ್ದಾರೆ.
7 ಜಿಲ್ಲೆಯ 20 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಶೇ. 63 ರಷ್ಟು ಮತದಾನ ಆಗಿದೆ. ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದ್ದು, 42,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಬಸ್ಗೆ ಬೆಂಕಿ: ಚುನಾವಣಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ಗೆ, ಚಾಯಿಬಾಸಾ ಸಮೀಪ ನಕ್ಸಲರು ಬೆಂಕಿ ಹಚ್ಚಿದ್ದಾರೆ. ಯಾವುದೇ ಸಾವು–ನೋವು ಸಂಭವಿಸಿಲ್ಲ. ಸಿಬ್ಬಂದಿಯನ್ನು ಮತ್ತೊಂದು ಬಸ್ಸಿನಲ್ಲಿ ಚುನಾವಣಾ ಕರ್ತವ್ಯಕ್ಕೆ ಕಳುಹಿಸಲಾಯಿತು.
ಭದ್ರತಾ ಸಿಬ್ಬಂದಿ ಬಂಧನ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಹಲ್ಲೆ ಮಾಡಿದ ಆರೋಪದ ಮೇಲೆ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ರಾಜೇಂದ್ರ ಸಿಂಗ್ ಮೀನಾ ಎಂಬಾತನನ್ನು ಬಂಧಿಸಿ, ಚಾಯಿಬಾಸಾ ಜೈಲಿಗೆ ಕಳುಹಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.