ADVERTISEMENT

ಕೋವಿಡ್ ನಿರ್ವಹಣೆಯಲ್ಲಿ ವಿಫಲ, ಭಾರತೀಯರನ್ನು ಬಡವರನ್ನಾಗಿಸಿದ ಕೇಂದ್ರ: ರಾಹುಲ್

ಏಜೆನ್ಸೀಸ್
Published 31 ಮೇ 2021, 10:31 IST
Last Updated 31 ಮೇ 2021, 10:31 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ತೀವ್ರವಾಗಿ ವ್ಯಾಪಿಸಿದ್ದು, ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವೈಫಲ್ಯ ಕಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ದುರಹಂಕಾರದಿಂದಾಗಿ ಶೇಕಡಾ 97ರಷ್ಟು ಭಾರತೀಯರನ್ನು ಬಡವರನ್ನಾಗಿಸಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಓರ್ವ ವ್ಯಕ್ತಿ (ಪ್ರಧಾನಿ ನರೇಂದ್ರ ಮೋದಿ) ಹಾಗೂ ಆತನ ದುರಹಂಕಾರ ಮತ್ತು ಒಂದು ವೈರಸ್ ಹಾಗೂ ಅದರ ರೂಪಾಂತರ ತಳಿಗಳಿಂದ ಆರ್ಥಿಕ ವಿನಾಶಕ್ಕೆ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಕೊರೊನಾವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಶೇಕಡಾ 97ರಷ್ಟು ಭಾರತೀಯರನ್ನು ಬಡವರನ್ನಾಗಿಸಿದೆ ಎಂಬ ವರದಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.

ರಾಹುಲ್ ಗಾಂಧಿ ಹಂಚಿಕೊಂಡಿರುವ ವರದಿಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ದೇಶದ ಉದ್ಯೋಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಸಂಬಳ ಗಿಟ್ಟಿಸುವ ಉದ್ಯೋಗಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದಲ್ಲದೆ ಶೇಕಡಾ 97ರಷ್ಟು ಭಾರತೀಯರ ಆದಾಯದಲ್ಲಿ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ವ್ಯಾಸ್ ವರದಿ ಪ್ರಕಾರ, ಹಣದುಬ್ಬರ ಲೆಕ್ಕ ಹಾಕಿದಾಗ ಕಳೆದ ವರ್ಷದ ಆದಾಯಕ್ಕೆ ಹೋಲಿಸಿದಾಗ ದೇಶದ 97 ಪ್ರತಿಶತಕ್ಕೂ ಹೆಚ್ಚು ಜನರನ್ನು ಬಡವರನ್ನಾಗಿಸಿದೆ ಎಂದು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.