ADVERTISEMENT

ಮೋರ್ಬಿ ಸೇತುವೆ ದುರಂತಕ್ಕೆ 1 ವರ್ಷ: ಸಂಬಂಧಿಕರನ್ನು ಕಳೆದುಕೊಂಡವರಿಂದ ಪ್ರತಿಭಟನೆ

ಪಿಟಿಐ
Published 30 ಅಕ್ಟೋಬರ್ 2023, 11:10 IST
Last Updated 30 ಅಕ್ಟೋಬರ್ 2023, 11:10 IST
<div class="paragraphs"><p>ಮೃತರ ಸಂಬಂಧಿಕರಿಂದ ಪ್ರತಿಭಟನೆ</p></div>

ಮೃತರ ಸಂಬಂಧಿಕರಿಂದ ಪ್ರತಿಭಟನೆ

   

– ಪಿಟಿಐ ಚಿತ್ರ

ಅಹಮದಾಬಾದ್‌: ಸುಮಾರು 135 ಮಂದಿಯ ಸಾವಿಗೆ ಕಾರಣವಾಗಿದ್ದ ಗುಜರಾತ್‌ನ ಮೋರ್ಬಿ ಸೇತುವೆ ದುರಂತಕ್ಕೆ ಒಂದು ವರ್ಷ ಸಂದಿದ್ದು, ನ್ಯಾಯ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ, ಮೃತರ ಕುಟುಂಬಸ್ಥರು ಸೋಮವಾರ ಸಬರಮತಿ ಆಶ್ರಮದ ಸಮೀಪ ಪ್ರತಿಭಟನೆ ನಡೆಸಿದರು.

ADVERTISEMENT

ಸಬರಮತಿ ಆಶ್ರಮದ ಎದುರು ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸುಮಾರು 40 ಮಂದಿ, ‘ಮೋರ್ಬಿ ದುರಂತದ ಬಲಿಪಶುಗಳ ಒಕ್ಕೂಟ’ ಎನ್ನುವ ಬ್ಯಾನರ್‌ನಡಿ ಪ್ರತಿಭಟನೆ ನಡೆಸಿದರು. ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

‘ಸಬರಮತಿ ಆಶ್ರಮದಿಂದ ಗಾಂಧಿನಗರದಲ್ಲಿರುವ ಮುಖ್ಯಮಂತ್ರಿ ಮನೆವರೆಗೂ ಮೆರವಣಿಗೆ ನಡೆಸುವ ಉದ್ದೇಶ ಇತ್ತು. ಆದರೆ ಅಧಿಕಾರಿಗಳು ಅದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಶ್ರದ್ಧಾಂಜಲಿ ಸಭೆ ನಡೆಸಿದೆವು’ ಎಂದು ಘಟನೆಯಲ್ಲಿ 10 ವರ್ಷದ ಮಗಳನ್ನು ಕಳೆದುಕೊಂಡಿರುವ, ಒಕ್ಕೂಟದ ಅಧ್ಯಕ್ಷರೂ ಆಗಿರುವ, ನರೇಂದ್ರ ಮಾರ್ಮರ್‌ ಹೇಳಿದರು.

‘ಘಟನೆಯ ತನಿಖೆ ವೇಗವಾಗಿ ನಡೆಯಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು.ಈಗಾಗಲೇ ಬಂದಕ್ಕೊಳಗಾದವರು ಸೇರಿದಂತೆ, ಎಸ್‌ಐಟಿ ದೋಷಿಗಳೆಂದುು ಗುರುತಿಸಿರುವರ ಬಂಧನವೂ ಆಗಬೇಕು’ ಎಂದು ಆಗ್ರಹಿಸಿದರು.

ಘಟನೆಯಲ್ಲಿ ಮೃತಪಟ್ಟ ಹೆಚ್ಚಿನವರು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಪಾರ್ಮರ್‌ ತಿಳಿಸಿದರು.

‘ಮನೆ ಮನೆಗೆ ತೆರಳಿ ಕೆಲಸ ಮಾಡಿ ಮಗನನ್ನು ಬೆಳೆಸಿದೆ. ಸರ್ಕಾರದ ಯಾವುದೇ ಪರಿಹಾರವೂ ನನಗಾಗಿರುವ ಗಾಯವನ್ನು ಅಳಿಸಲು ಸಾಧ್ಯವಿಲ್ಲ’ ಎಂದು ಘಟನೆಯಲ್ಲಿ ಮ‌ಗನನ್ನು ಕಳೆದುಕೊಂಡ ತಾಯಿಯೊಬ್ಬರು ದುಃಖ ವ್ಯಕ್ತಪಡಿಸಿದರು.

ಗುಜರಾತ್‌ ಹೈಕೋರ್ಟ್‌ಗೆ ಸಲ್ಲಿಕೆಯಾದ ವರದಿ ಪ್ರಕಾರ ಈ ದುರಂತದಿಂದಾಗಿ, 20 ಮಕ್ಕಳು ಅನಾಥರಾಗಿದ್ದಾರೆ. 13 ಮಕ್ಕಳು ತಂದೆ–ತಾಯಿಯಲ್ಲಿ ಒಬ್ಬರನ್ನು ಕಳೆದುಕೊಂಡಿದ್ದಾರೆ. 7 ಮಕ್ಕಳು ಇಬ್ಬರನ್ನೂ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.