
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗ ಮತ್ತು ಪ್ರಜಾಪ್ರಭುತ್ವದ ಇತರ ಸಂಸ್ಥೆಗಳ ವಿರುದ್ಧ ಪ್ರಚೋದನಾಕಾರಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ದೇಶದ ವಿವಿಧ ಕ್ಷೇತ್ರಗಳ 272 ಗಣ್ಯರ ಗುಂಪು ಬಹಿರಂಗ ಪತ್ರ ಬರೆದಿದೆ.
16 ಮಾಜಿ ನ್ಯಾಯಾಧೀಶರು, 123 ನಿವೃತ್ತ ಅಧಿಕಾರಿಗಳು, 14 ಮಾಜಿ ರಾಯಭಾರಿಗಳು, 133 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ಈ ಪತ್ರ ಬರೆಯಲಾಗಿದೆ.
ಚುನಾವಣಾ ಆಯೋಗದ ವಿರುದ್ಧ ಮತಕಳವು ಆರೋಪವನ್ನು ಪದೇ ಪದೇ ಮಾಡುತ್ತಿರುವ ರಾಹುಲ್ ಅವರು ಈ ಸಂಬಂಧ ಔಪಚಾರಿಕ ದೂರು ನೀಡುವ ಅಥವಾ ಪ್ರಮಾಣ ಸಲ್ಲಿಸುವ ಗೋಜಿಗೆ ಹೋಗಿಲ್ಲ ಎಂದು ಗುಂಪು ಕಿಡಿಕಾರಿದೆ.
‘ಸುಳ್ಳು ಆರೋಪಗಳ ಮೂಲಕ ಭಾರತದ ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲೆ ದಾಳಿ ನಡೆಸುವುದು ತೀವ್ರ ಕಳವಳಕಾರಿ ವಿಷಯವಾಗಿದ್ದು, ನಾಗರಿಕ ಸಮಾಜದ ಹಿರಿಯ ನಾಗರಿಕರಾದ ನಾವು ಅದನ್ನು ಖಂಡಿಸುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.