ADVERTISEMENT

Operation Sindoor | ಪಾಕ್‌ಗೆ ಸರ್ಕಾರದಿಂದಲೇ ಮಾಹಿತಿ: ರಾಹುಲ್ ಆರೋಪ

ವಾಸ್ತವ ಸಂಗತಿಗಳ ತಪ್ಪು ನಿರೂಪಣೆ: ವಿದೇಶಾಂಗ ಸಚಿವಾಲಯ

​ಪ್ರಜಾವಾಣಿ ವಾರ್ತೆ
ಪಿಟಿಐ
Published 18 ಮೇ 2025, 0:30 IST
Last Updated 18 ಮೇ 2025, 0:30 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಆಪರೇಷನ್‌ ಸಿಂಧೂರ’ ಭಾಗವಾಗಿ ‍ಪಾಕಿಸ್ತಾನದ ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ಕುರಿತು ಕೇಂದ್ರ ಸರ್ಕಾರ ಮುಂಚಿತವಾಗಿಯೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿತ್ತು. ಇದು ಅಪರಾಧ ಎಂದು ರಾಹುಲ್ ಗಾಂಧಿ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪಗಳನ್ನು ತಳ್ಳಿ ಹಾಕಿರುವ ವಿದೇಶಾಂಗ ಸಚಿವಾಲಯ, ‘ವಾಸ್ತವ ಸಂಗತಿಗಳನ್ನು ತಪ್ಪಾಗಿ ನಿರೂಪಿಸುವ ಯತ್ನ ಇದು’ ಎಂದು ಹೇಳಿದೆ.

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಮಾತುಗಳಿರುವ ವಿಡಿಯೊವೊಂದನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ,‘ಆಪರೇಷನ್‌ ಸಿಂಧೂರ’ ಕುರಿತು ಪಾಕಿಸ್ತಾನಕ್ಕೆ ಸರ್ಕಾರವೇ ಮಾಹಿತಿ ನೀಡಿರುವುದನ್ನು ಜೈಶಂಕರ್‌ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ’ ಆರೋಪಿಸಿದ್ದಾರೆ.

ADVERTISEMENT

ಅಲ್ಲದೇ, ಈ ಕಾರ್ಯಾಚರಣೆಯಿಂದಾಗಿ ವಾಯುಪಡೆಯು ಎಷ್ಟು ಯುದ್ಧವಿಮಾನಗಳನ್ನು ಕಳೆದುಕೊಂಡಿದೆ ಎಂದೂ ಪ್ರಶ್ನಿಸಿದ್ದಾರೆ.

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ಪ್ರಕಾಶನ ವಿಭಾಗವು, ‘ನಾವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದೆವು ಎಂದು ಸಚಿವ ಜೈಶಂಕರ್ ಹೇಳಿದ್ದಾರೆ. ಆಪರೇಷನ್ ಸಿಂಧೂರ ಶುರುವಾದ ನಂತರದ ಆರಂಭಿಕ ಹಂತದಲ್ಲಿ ಹೇಳಿದ್ದ ಮಾತಿದು ಎಂಬುದು ಸ್ಪಷ್ಟ. ಆದರೆ, ಜೈಶಂಕರ್ ಅವರು ದಾಳಿ ಆರಂಭಕ್ಕೂ ಮುನ್ನವೇ ಹೀಗೆ ಹೇಳಿದ್ದರು ಎಂದು ತಪ್ಪಾಗಿ ನಿರೂಪಿಸಲಾಗುತ್ತಿದೆ. ಇದನ್ನು ಒಪ್ಪಲಾಗದು’ ಎಂದು ಹೇಳಿದೆ.

ಬಿಜೆಪಿ ಟೀಕೆ: ಇದೇ ವಿಚಾರವಾಗಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ‘ರಾಹುಲ್‌ ಗಾಂಧಿ ಅವರು ಪಾಕಿಸ್ತಾನ ಪರ ಪ್ರಚಾರ ಮಾಡುವ ಸಾಧನದಂತೆ ವರ್ತಿಸುವುದನ್ನು ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ಬಿಡಬೇಕು’ ಎಂದು ಹೇಳಿದೆ.

‘ಆಪರೇಷನ್‌ ಸಿಂಧೂರ ಭಾಗವಾಗಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಧ್ವಂಸ ಮಾಡಿರುವುದು ಕಾಂಗ್ರೆಸ್‌ಗೆ ಖುಷಿ ತಂದಿಲ್ಲವೇ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್‌ ಭಂಡಾರಿ ಪ್ರಶ್ನಿಸಿದ್ದಾರೆ.

‘ಅಮೆರಿಕ ಒತ್ತಡಕ್ಕೆ ಮಣಿದ ಕೇಂದ್ರ’

ನವದೆಹಲಿ: ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಪ್‌) ಕಾರ್ಯ ಕಾರಿ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸರ್ಕಾರ, ಅಮೆರಿಕದ ಒತ್ತಡಕ್ಕೆ ಮಣಿಯಿತು. ಐಎಂಎಫ್‌ನ ಇದೇ ಸಭೆಯಲ್ಲಿ, ಪಾಕಿಸ್ತಾನಕ್ಕೆ ಸಾಲ ಮಂಜೂರು ಮಾಡಲಾಗಿದೆ ಎಂದು ಕಾಂಗ್ರೆಸ್‌ ಶನಿವಾರ ಆರೋಪಿಸಿದೆ.

ಪಾಕಿಸ್ತಾನಕ್ಕೆ ಹಣಕಾಸು ನೆರವು ನೀಡಿರುವ ಬಗ್ಗೆ ಐಎಂಎಫ್‌ ಮರುಚಿಂತನೆ ಮಾಡಬೇಕು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಒತ್ತಾಯಿಸಿದ ಮಾರನೇ ದಿನವೇ, ಕಾಂಗ್ರೆಸ್ ಈ ಆರೋಪ ಮಾಡಿದೆ. ‘ಪಾಕಿಸ್ತಾನಕ್ಕೆ ಸಾಲ ನೀಡಿರುವುದಕ್ಕೆ ಮೇ 9ರಂದು ಅನುಮೋದನೆ ನೀಡಿದ ವಿಚಾರವಾಗಿ ಸಚಿವ ರಾಜನಾಥ್‌ ಸಿಂಗ್ ಐಎಂಎಫ್‌ ಅನ್ನು ಈಗ ಟೀಕಿಸುತ್ತಿದ್ದಾರೆ. ಈಗ ಸರ್ಕಾರ ಎಚ್ಚೆತ್ತುಕೊಂಡಿದೆ. ಆದರೆ, ಇಂತಹ ಸಾಧ್ಯತೆ ಬಗ್ಗೆ ಏಪ್ರಿಲ್ 29ರಂದೇ ಕಾಂಗ್ರೆಸ್‌ ಪಕ್ಷವು ಸರ್ಕಾರವನ್ನು ಎಚ್ಚರಿಸಿತ್ತು. ಪಾಕಿಸ್ತಾನಕ್ಕೆ ಸಾಲ ನೀಡುವುದನ್ನು ಭಾರತ ವಿರೋಧಿಸಬೇಕು ಎಂದೂ ಹೇಳಿತ್ತು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

‘ಮೇ 9ರ ಸಭೆಯಿಂದ ಭಾರತ ದೂರ ಉಳಿಯಿತು. ಅದೊಂದೇ ಭಾರತದ ಮುಂದಿದ್ದ ಆಯ್ಕೆಯಾಗಿತ್ತು ಎಂದು ಮೋದಿ ಸರ್ಕಾರದ ಬೆಂಬಲಿಗರು, ಸಮರ್ಥಕರು ವಾದಿಸುತ್ತಿದ್ದಾರೆ. ಇದು ಸುಳ್ಳು. ಐಎಂಎಫ್‌ ಕಾರ್ಯಕಾರಿ ಮಂಡಳಿ ಸಭೆಯಲ್ಲಿ, ವಿರೋಧ ವ್ಯಕ್ತಪಡಿಸುವುದಕ್ಕೆ ಅವಕಾಶ ಇದೇ ಇದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.