ADVERTISEMENT

ದೆಹಲಿ ಗಲಭೆ: ಹಿಂಸೆಯಲ್ಲಿ ಪೊಲೀಸರ ಪಾತ್ರದ ಕುರಿತು ತನಿಖೆಗೆ ಆಗ್ರಹ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭೇಟಿಯಾದ ವಿರೋಧ ಪಕ್ಷದ ನಾಯಕರು

ಪಿಟಿಐ
Published 17 ಸೆಪ್ಟೆಂಬರ್ 2020, 12:06 IST
Last Updated 17 ಸೆಪ್ಟೆಂಬರ್ 2020, 12:06 IST
ರಾಷ್ಟ್ರಪತಿ ಅವರನ್ನು ಭೇಟಿಯಾದ ವಿರೋಧ ಪಕ್ಷದ ನಾಯಕರಾದ ಅಹ್ಮದ್‌ ಪಟೇಲ್‌, ಡಿ.ರಾಜಾ, ಸೀತಾರಾಮ್‌ ಯೆಚೂರಿ, ಮನೋಜ್‌ ಜಾ   –ಪಿಟಿಐ ಚಿತ್ರ 
ರಾಷ್ಟ್ರಪತಿ ಅವರನ್ನು ಭೇಟಿಯಾದ ವಿರೋಧ ಪಕ್ಷದ ನಾಯಕರಾದ ಅಹ್ಮದ್‌ ಪಟೇಲ್‌, ಡಿ.ರಾಜಾ, ಸೀತಾರಾಮ್‌ ಯೆಚೂರಿ, ಮನೋಜ್‌ ಜಾ   –ಪಿಟಿಐ ಚಿತ್ರ    

ನವದೆಹಲಿ: ಈಶಾನ್ಯ ದೆಹಲಿಯಲ್ಲಿಕಳೆದ ಫೆಬ್ರುವರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿಯಾದ ವಿರೋಧ ಪಕ್ಷದ ನಾಯಕರು, ಗಲಭೆಯಲ್ಲಿ ಪೊಲೀಸರ ಪಾತ್ರದ ಕುರಿತು ಪ್ರಶ್ನೆ ಎತ್ತಿದ್ದಾರೆ.

ಈ ಕುರಿತು ಜಂಟಿ ಮನವಿ ಸಲ್ಲಿಸಿರುವ ನಾಯಕರು,ಪೊಲೀಸರ ಪಾತ್ರದ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ದೆಹಲಿ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆವಿಶ್ವಾಸವಿಲ್ಲ ಎಂದಿದ್ದಾರೆ. ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು. ಈ ಕುರಿತ ತನಿಖೆಗೆ ದೆಹಲಿ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಜೊತೆಗೆ ದೆಹಲಿ ಪೊಲೀಸ್‌ ವಿಶೇಷ ಕೋಶವೂ ಗಲಭೆ ಹಿಂದಿನ ಪಿತೂರಿ ಕುರಿತು ತನಿಖೆ ನಡೆಸುತ್ತಿದೆ.

‘ಗಲಭೆ ಸಂದರ್ಭದಲ್ಲಿ ದೆಹಲಿ ಪೊಲೀಸರ ಪಾತ್ರದ ಬಗ್ಗೆ ಗಂಭೀರ ಪ‍್ರಶ್ನೆಗಳಿವೆ. ಪೌರತ್ವ(ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದ ಯುವಜನರನ್ನು ಗುರಿಯಾಗಿಸಿಕೊಂಡು ಪೊಲೀಸರು ನಕಲಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಹಾಗೂ ಗಲಭೆ ಹಿಂದೆ ಇವರ ಪಿತೂರಿ ಇದೆ ಎಂದು ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರಕರಣದಲ್ಲಿ ರಾಜಕೀಯ ನಾಯಕರನ್ನೂ ಗುರಿಯಾಗಿಸಿಕೊಂಡು ಪಿತೂರಿ ನಡೆಸಲಾಗುತ್ತಿದೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಅವರ ಹೆಸರನ್ನು ಸೇರಿಸಿರುವ ಪೊಲೀಸ್ ನಡೆಯನ್ನು’ ವಿರೋಧ ಪಕ್ಷದ ನಾಯಕರು ಪತ್ರದಲ್ಲಿ ಟೀಕಿಸಿದ್ದಾರೆ.

ADVERTISEMENT

‘ಸಮವಸ್ತ್ರದಲ್ಲೇ ಇದ್ದ ಪೊಲೀಸರು, ಗಾಯಗೊಂಡು ರಸ್ತೆಯಲ್ಲಿ ಮಲಗಿದ್ದ ಯವಕರ ಮೇಲೆ ಹಲ್ಲೆ ನಡೆಸಿ, ರಾಷ್ಟ್ರಗೀತೆ ಹಾಡುವಂತೆ ಲಾಠಿಯಲ್ಲಿ ಹೊಡೆಯುತ್ತಿರುವ ವಿಡಿಯೊ, ಬಿಜೆಪಿ ನಾಯಕರ ದ್ವೇಷ ಭಾಷಣದ ಬಗ್ಗೆ ಪೊಲೀಸರ ನಿರ್ಲಕ್ಷ್ಯ ಸೇರಿದಂತೆಹಿಂಸಾಚಾರದಲ್ಲಿ ಪೊಲೀಸರೂ ಭಾಗಿಯಾಗಿರುವುದಕ್ಕೆ ಹಲವು ಸಾಕ್ಷಿಗಳಿವೆ. ಈ ಕುರಿತು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರಕ್ಕೆ ಸೂಚಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.