ನವದೆಹಲಿ: ‘ಆಪರೇಷನ್ ಸಿಂಧೂರ’ದ ನಂತರ ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿದೇಶಗಳಿಗೆ ಕಳುಹಿಸಿರುವ ಸರ್ವ ಪಕ್ಷಗಳ ನಿಯೋಗಗಳ ಸಂಸದರ ಪೈಕಿ ಆಡಳಿತ ಪಕ್ಷದ ಸಂಸದರಿಗೆ ಹೋಲಿಸಿದರೆ, ವಿರೋಧ ಪಕ್ಷಗಳು ಹೆಚ್ಚು ಪರಿಣಾಮಕಾರಿಯಾಗಿ ಭಾರತದ ನಿಲುವನ್ನು ವ್ಯಕ್ತಪಡಿಸಿವೆ ಎಂದು ಕಾಂಗ್ರೆಸ್ ಮಂಗಳವಾರ ತಿಳಿಸಿದೆ.
ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಆಡಳಿತ ಪಕ್ಷದ ಸಂಸದರಿಗಿಂತ ವಿರೋಧ ಪಕ್ಷದ ಸದಸ್ಯರು ಭಾರತದ ಹಿತಾಸಕ್ತಿಗಳನ್ನು ಬಹಳ ಪರಿಣಾಮಕಾರಿಯಾಗಿ ಜಗತ್ತಿನ ಮುಂದಿಡುತ್ತಿದ್ದಾರೆ. ಬಿಜೆಪಿ ಮತ್ತು ವಿರೋಧ ಪಕ್ಷದ ಸಂಸದರು ಹೇಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುವುದನ್ನು ಜನರು ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯ ಕೆಲವು ಸಂಸದರು ಪ್ರವಾಸಿ ತಾಣಗಳಿಗೆ ಹೋಗಿ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸಂಸದರು ಆಪರೇಷನ್ ಸಿಂಧೂರದ ಕಾರ್ಯಾಚರಣೆಯ ಕುರಿತು ಭಾರತದ ಅಭಿಪ್ರಾಯಗಳನ್ನು ಇತರೆ ದೇಶಗಳ ಮುಂದೆ ವ್ಯಕ್ತಪಡಿಸುವ ರೀತಿಯನ್ನು ಗಮನಿಸಿ ಎಂದು ಬಿಜೆಪಿ ಸಂಸದ ನಿಶಿಂಕತ್ ದುಬೆ ಹೆಸರನ್ನು ಉಲ್ಲೇಖಿಸದೆ ಆಡಳಿತ ಪಕ್ಷದ ವಿರುದ್ಧ ಖೇರಾ ಟೀಕಾಪ್ರಹಾರ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಟ್ರೋಲ್ಗಳಿಂದ ಸ್ಫೂರ್ತಿ ಪಡೆಯುತ್ತಿದೆ. ಅದೇ ರೀತಿ ನಿರ್ವಹಿಸುತ್ತಿದೆ. ಪ್ರಧಾನಿ ಮಂತ್ರಿಯೇ ಟ್ರೋಲ್ ಭಾಷೆಗಳಲ್ಲಿ ಮಾತನಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಧಾರ್ಮಿಕ ಉನ್ಮಾದವನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ಖೇರಾ ಆರೋಪಿಸಿದ್ದಾರೆ.
ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಮತ್ತು ‘ಆಪರೇಷನ್ ಸಿಂಧೂರ’ದ ನಂತರ ಭಾರತವು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವದ ಮುಂದೆ ತೆರೆದಿಡಲು ರಾಜತಾಂತ್ರಿಕ ಕಾರ್ಯಾಚರಣೆಯ ಹೆಜ್ಜೆ ಇರಿಸಿ, ಇದಕ್ಕಾಗಿ ಸರ್ವ ಪಕ್ಷಗಳ ಸಂಸದರ ನೇತೃತ್ವದಲ್ಲಿ ನಿಯೋಗಗಳನ್ನು ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಕಳುಹಿಸಿಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.