ADVERTISEMENT

ರಾಜ್ಯಸಭೆ ಕಲಾಪ: ಅಮಾನತು ಹಿಂಪಡೆಯುವವರೆಗೆ ಬಹಿಷ್ಕಾರ ತೀರ್ಮಾನ

ವಿರೋಧಪಕ್ಷಗಳಿಂದ ಸಭಾತ್ಯಾಗ

ಪಿಟಿಐ
Published 22 ಸೆಪ್ಟೆಂಬರ್ 2020, 7:02 IST
Last Updated 22 ಸೆಪ್ಟೆಂಬರ್ 2020, 7:02 IST
ರಾಜ್ಯಸಭೆಯ ಎಂಟು ಸದಸ್ಯರ ಅಮಾನತು ಖಂಡಿಸಿ ಕಾಂಗ್ರೆಸ್ ಪಕ್ಷದ ಗುಲಾಂ ನಬಿ ಅಜಾದ್ ಮತ್ತು ಇತರೆ ಸದಸ್ಯರು ಮಂಗಳವಾರ ಕಲಾಪ ಬಹಿಷ್ಕರಿಸಿ ಹೊರನಡೆದರು
ರಾಜ್ಯಸಭೆಯ ಎಂಟು ಸದಸ್ಯರ ಅಮಾನತು ಖಂಡಿಸಿ ಕಾಂಗ್ರೆಸ್ ಪಕ್ಷದ ಗುಲಾಂ ನಬಿ ಅಜಾದ್ ಮತ್ತು ಇತರೆ ಸದಸ್ಯರು ಮಂಗಳವಾರ ಕಲಾಪ ಬಹಿಷ್ಕರಿಸಿ ಹೊರನಡೆದರು   

ನವದೆಹಲಿ: ಎಂಟು ಸದಸ್ಯರ ಅಮಾನತು ಆದೇಶ ಹಿಂಪಡೆಯುವವರೆಗೂ ರಾಜ್ಯಸಭೆಯ ಕಲಾಪದಿಂದ ವಿರೋಧಪಕ್ಷಗಳು ದೂರ ಉಳಿಯಲಿವೆ ಎಂದು ವಿರೋಧಪಕ್ಷದ ನಾಯಕ ಗುಲಾಂ ನಬಿ ಅಜಾದ್ ಮಂಗಳವಾರ ತಿಳಿಸಿದರು.

ಶೂನ್ಯವೇಳೆಯ ಬಳಿಕ ಮಾತನಾಡಿದಅವರು, ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತಲೂ (ಎಂ.ಎಸ್.ಪಿ) ಕಡಿಮೆ ಬೆಲೆಗೆ ಖಾಸಗಿಯವರು ಆಹಾರಧಾನ್ಯ ಖರೀದಿಸಲು ಅವಕಾಶವಿಲ್ಲದಂತೆ ಮಸೂದೆಯನ್ನು ತರಬೇಕು ಎಂದು ಒತ್ತಾಯಿಸಿದರು.

ಸ್ವಾಮಿನಾಥನ್ ಸೂತ್ರದ ಅನುಸಾರ ಕಾಲ ಕಾಲಕ್ಕೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪರಿಷ್ಕರಿಸಬೇಕು ಎಂದೂ ಅವರು ಒತ್ತಾಯಿಸಿದರು.

ADVERTISEMENT

ಕೃಷಿ ಮಸೂದೆ ವಿರುದ್ಧದ ಚರ್ಚೆ ವೇಳೆ ಅನುಚಿತ ವರ್ತನೆ ಆರೋಪದ ಮೇಲೆ ರಾಜ್ಯಸಭೆಯ ಎಂಟು ಸದಸ್ಯರನ್ನು ಅಮಾನತುಪಡಿಸಲಾಗಿಎ. ಈ ನಡುವೆಯೇ, ಮಸೂದೆಯೂ ಧ್ವನಿಮತದಿಂದ ಅಂಗೀಕಾರಗೊಂಡಿದೆ.

ವಿರೋಧಪಕ್ಷಗಳಿಂದ ಸಭಾತ್ಯಾಗ:

ಎಂಟು ಸದಸ್ಯರ ಅಮಾನತು ಆದೇಶ ರದ್ದುಪಡಿಸಲು ಆಗ್ರಹಪಡಿಸಿ ಇದಕ್ಕೂ ಮೊದಲು ವಿರೋಧಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.

ಕಾಂಗ್ರೆಸ್ ಮೊದಲಿಗೆ ಸದನದಿಂದ ಹೊರನಡೆದರೆ, ಹಿಂದೆಯೇ ಎಎಪಿ, ಟಿಎಂಸಿ ಮತ್ತು ಎಡಪಕ್ಷಗಳು ಕೂಡಾ ಹೊರನಡೆದವು. ಈ ಪಕ್ಷಗಳಿಗೆ ಸೇರಿದ ಎಂಟು ಸದಸ್ಯರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತುಪಡಿಸಲಾಗಿದೆ.

ಅಲ್ಲದೆ ಎನ್.ಸಿ.ಪಿ., ಎಸ್.ಪಿ., ಶಿವಸೇನೆ, ಆರ್.ಜೆ.ಡಿ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗ ನಿರ್ಧಾರ ಕೈಬಿಡಲು ಸಭಾಪತಿ ಎಂ.ವೆಂಕಯ್ಯನಾಯ್ಡು ಮನವಿ ಮಾಡಿದರು. ಆದರೆ, ವಿರೋಧಪಕ್ಷಗಳು ಇದನ್ನು ಪುರಸ್ಕರಿಸಲಿಲ್ಲ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಕಲಾಪವನ್ನು ಸುಲಲಿತವಾಗಿ ನಡೆಸಲು ಸರ್ಕಾರ ಮತ್ತು ವಿರೋಧಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.