ADVERTISEMENT

ರಾಜ್ಯಸಭೆ: ವ್ಯಾಪಾರ ಒಪ್ಪಂದ ಕುರಿತ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳಿಂದ ಸಭಾತ್ಯಾಗ

ಪಿಟಿಐ
Published 4 ಫೆಬ್ರುವರಿ 2026, 1:10 IST
Last Updated 4 ಫೆಬ್ರುವರಿ 2026, 1:10 IST
<div class="paragraphs"><p>ಸಂಸದರ ಅಮಾನತು ಖಂಡಿಸಿ ಸಂಸತ್‌ ಹೊರಗಡೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು</p></div>

ಸಂಸದರ ಅಮಾನತು ಖಂಡಿಸಿ ಸಂಸತ್‌ ಹೊರಗಡೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು

   

 –ಪಿಟಿಐ ಚಿತ್ರ

ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಈ ಕುರಿತ ಚರ್ಚೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಹಲವು ಸದಸ್ಯರು ಮಂಗಳವಾರ ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು.

ADVERTISEMENT

ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಶೂನ್ಯ ಅವಧಿ ಮುಕ್ತಾಯವಾದ ಕೂಡಲೇ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದರು. ‘ಒಪ್ಪಂದದ ಕುರಿತ ಮಾಹಿತಿಯನ್ನು ಅಮೆರಿಕದಿಂದ ತಿಳಿದುಕೊಳ್ಳಬೇಕಾಯಿತು’ ಎಂದರು.

ವಿಪಕ್ಷಗಳ ಸದಸ್ಯರು ಪ್ರತಿಭಟನೆ ಆರಂಭಿಸುತ್ತಿದ್ದಂತೆಯೇ, ಸದನದ ನಾಯಕ ಜೆ.ಪಿ.ನಡ್ಡಾ ಅವರು, ‘ಭಾರತದ ಸರಕುಗಳ ಮೇಲಿನ ಸುಂಕ ಇಳಿಕೆ ಬಗ್ಗೆ ಅಮೆರಿಕ ಅಧ್ಯಕ್ಷರು ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ’ ಎಂದರು.

‘ವಿರೋಧ ಪಕ್ಷಗಳ ಹತಾಶೆಯ ಕಟ್ಟೆ ಒಡೆದಿದೆ. ಒಳ್ಳೆಯ ಸಂಗತಿಗಳಲ್ಲೂ ಅವುಗಳಿಗೆ ಕೆಟ್ಟದ್ದು ಕಾಣುತ್ತಿದೆ’ ಎಂದು ದೂರಿದರು.

‘ಭಾರತ–ಅಮೆರಿಕ ಒಪ್ಪಂದದ ಬಗ್ಗೆ  ಚರ್ಚಿಸಲು ಸರ್ಕಾರ ಸಿದ್ಧವಿದೆ. ಈ ಕುರಿತ ಎಲ್ಲ ಮಾಹಿತಿಯನ್ನೂ ನೀಡಲಿದೆ ಎಂದು ಭರವಸೆ ನೀಡುತ್ತೇನೆ. ಸರ್ಕಾರ ಈ ಒಪ್ಪಂದದ ಬಗ್ಗೆ ಸ್ವಯಂ ಪ್ರೇರಿತ ಹೇಳಿಕೆಯನ್ನು ಕೂಡ ಬಿಡುಗಡೆ ಮಾಡಲಿದೆ’ ಎಂದು ತಿಳಿಸಿದರು.

‘ತರಾತುರಿಯಲ್ಲಿ ಪ್ರತಿಕ್ರಿಯೆ ನೀಡುವುದೇ ಪ್ರಜಾಪ್ರಭುತ್ವಕ್ಕೆ ಮಾರಕ. ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟದ ಪಕ್ಷಗಳು ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿವೆ’ ಎಂದರು.

ಈ ಮಧ್ಯೆ, ವಿರೋಧ ಪಕ್ಷಗಳ ಸದಸ್ಯರು, ಭಾರತದ ಹಿತಾಸಕ್ತಿಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಘೋಷಣೆ ಕೂಗುತ್ತಾ ಸದನದಿಂದ ಹೊರನಡೆದರು.

ಟ್ರಂಪ್‌ಗೆ ಮೋದಿ ಶರಣು: ಕಾಂಗ್ರೆಸ್‌

ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಜೊತೆಗಿನ ಒಪ್ಪಂದಗಳ ವಿಚಾರವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತು ಮತ್ತು ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಮಂಗಳವಾರ ಆಗ್ರಹಿಸಿದೆ.

ಇದೇ ಸಂದರ್ಭದಲ್ಲಿ, ‘ನರೇಂದ್ರ ಮೋದಿ ಅವರು ಭಾರತದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ಡೊನಾಲ್ಡ್ ಟ್ರಂಪ್ ಅವರಿಗೆ ಸಂಪೂರ್ಣವಾಗಿ ಶರಣಾಗಿದ್ದಾರೆ’ ಎಂದು ಆರೋಪಿಸಿದೆ.

‘ಭಾರತ–ಪಾಕಿಸ್ತಾನ ಕದನ ವಿರಾಮ ಘೋಷಣೆಯಂತೆ ವ್ಯಾಪಾರ ಒಪ್ಪಂದದ ಬಗ್ಗೆಯೂ ಟ್ರಂಪ್‌ ಘೋಷಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ‘ಮನವಿಯ ಮೇರೆಗೆ’ ಒಪ್ಪಂದ ಏರ್ಪಟ್ಟಿದೆ ಎಂದೂ ಹೇಳಲಾಗಿದೆ. ಈ ಒಪ್ಪಂದ ಸಂಪೂರ್ಣ ವಿವರ ಬಹಿರಂಗವಾಗಬೇಕಿದೆ’ ಎಂದು ಅದು ‘ಎಕ್ಸ್‌’ನಲ್ಲಿ ಆಗ್ರಹಿಸಿದೆ.

‘ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ, ಅಮೆರಿಕ ಮತ್ತು ವೆನೆಜುವೆಲಾದಿಂದ ಖರೀದಿಸಲಿದೆ ಎಂದೂ ಹೇಳಲಾಗಿದೆ. ನಿಜಕ್ಕೂ ಭಾರತ ಈ ಷರತ್ತಿಗೆ ಒಪ್ಪಿಗೆ ನೀಡಿದೆಯೇ’ ಎಂದು ಪ್ರಶ್ನಿಸಿದೆ.

ಒತ್ತಡಕ್ಕೆ ಮಣಿದ ಮೋದಿ: ರಾಹುಲ್‌ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಒತ್ತಡಕ್ಕೆ ಮಣಿದು ಭಾರತ–ಅಮೆರಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಈ ಮೂಲಕ ಭಾರತೀಯ ರೈತರ ಪರಿಶ್ರಮವನ್ನು ‘ಮಾರಾಟ’ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.

‘ನಾಲ್ಕು ತಿಂಗಳು ನನೆಗುದಿಗೆ ಬಿದ್ದಿದ್ದ ವ್ಯಾಪಾರ ಒಪ್ಪಂದವು ಕಳೆದ ರಾತ್ರಿ ಅಂತಿಮಗೊಂಡಿದ್ದು ಏಕೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ಒತ್ತಡವಿದೆ’ ಎಂದು ಅವರು ಹೇಳಿದರು.

ಯಾವ ರೀತಿಯ ಒತ್ತಡ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, ‘ಅಮೆರಿಕದಲ್ಲಿ ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಅವರ ವಿರುದ್ಧ ಪ್ರಕರಣವಿದೆ ಮತ್ತು ಎಪ್‌ಸ್ಟೈನ್‌ ಕಡತದಲ್ಲಿನ ಮತ್ತಷ್ಟು ‘ರಹಸ್ಯ’ಗಳು ಬಹಿರಂಗವಾಗಬೇಕಿವೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರಾಜಿಯಾಗಿದ್ದಾರೆ. ಭಾರತೀಯ ರೈತರ ಪರಿಶ್ರಮ, ಅವರ ‘ರಕ್ತ ಮತ್ತು ಬೆವರು’ ಮಾರಾಟವಾಗಿದೆ. ಇಡೀ ದೇಶವನ್ನೇ ಮಾರಾಟ ಮಾಡಲಾಗಿದೆ’ ಎಂದರು.

‘ಕಾಂಗ್ರೆಸ್‌ ಭಾರತದ ಪರವೋ, ವಿರುದ್ಧವೋ?’

‘ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಭಾರತದ ಹಿತಾಸಕ್ತಿ ಪರವಾಗಿವೆಯೇ ಅಥವಾ ವಿರುದ್ಧವಾಗಿವೆಯೇ’ ಎಂದು ಬಿಜೆಪಿ ಸಂಸದ ಅನುರಾಗ್‌ ಠಾಕೂರ್ ಅವರು ಪ್ರಶ್ನಿಸಿದರು.

ರಾಹುಲ್‌ ಗಾಂಧಿ ಹೇಳಿಕೆ ನೀಡಿದ ಬೆನ್ನಲ್ಲೇ ಸಂಸತ್‌ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಮೆರಿಕವು ಭಾರತದ ಮೇಲೆ ಸುಂಕ ವಿಧಿಸಿದಾಗ ಹಲವು ವಿರೋಧ ಪಕ್ಷಗಳು ಸಂಭ್ರಮಿಸಿದ್ದವು. ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡಾಗಲೂ ಪ್ರಶ್ನಿಸಿದ್ದವು. ಹೀಗಾಗಿ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಭಾರತದ ಹಿತಾಸಕ್ತಿ ಪರವಾಗಿವೆಯೇ ಅಥವಾ ವಿರುದ್ಧವಾಗಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ’ ಎಂದು ಹೇಳಿದರು.

ಇಂಥ ಭಾರತ ವಿರೋಧಿ ಮನಃಸ್ಥಿತಿಯು ರಾಹುಲ್‌ ಗಾಂಧಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅವರು ಸಂಸತ್‌ ಸರಿಯಾಗಿ ಕಾರ್ಯನಿರ್ವಹಿಸಲೂ ಬಿಡುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.