ಐಜ್ವಾಲ್: ಗಲಭೆಪೀಡಿತ ಮಣಿಪುರದಿಂದ 5,822 ಮಂದಿ ಮಿಜೋರಾಂಗೆ ಪಲಾಯನ ಮಾಡಿದ್ದು, ಅಲ್ಲಿನ ವಿವಿಧ ಜಿಲ್ಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಚಿನ್– ಕುಕಿ– ಮಿಜೋ ಸಮುದಾಯಕ್ಕೆ ಸೇರಿರುವ ಈ ಜನರು ಮಿಜೋರಾಂನ ಆರು ಜಿಲ್ಲೆಗಳಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದೂ ವಿವರಿಸಿದ್ದಾರೆ.
ಮಣಿಪುರದಿಂದ ಬಂದಿರುವ ಜನರು ಐಜ್ವಾಲ್ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದೂ ಹೇಳಿದ್ದಾರೆ.
ಬುಡಕಟ್ಟು ಜನರಿಗೆ ಪ್ರತ್ಯೇಕ ಆಡಳಿತ ನೀಡಬೇಕೆಂದು ಮಣಿಪುರದ ಏಳು ಮಂದಿ ಬಿಜೆಪಿ ಶಾಸಕರೂ ಸೇರಿದಂತೆ 10 ಮಂದಿ ಕುಕಿ ಸಮುದಾಯದ ಶಾಸಕರು ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ಈ ಬೇಡಿಕೆಯನ್ನು ಮಿಜೋರಾಂನ ಸಂಸದ ಸಿ. ಲಾಲ್ರೋಸಂಗ ಅವರು ಕೂಡ ಅನುಮೋದಿಸಿದ್ದಾರೆ.
ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿರುವ ಮೈತೇಯಿ ಸಮುದಾಯವು ತಮಗೆ ಎಸ್ಟಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಡ ತಂದಿದ್ದು, ಮೈತೇಯಿ ಸಮುದಾಯದವರ ಮೀಸಲಾತಿ ಬೇಡಿಕೆಯನ್ನು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳು ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಹಿಂಸಾಚಾರ ಸಂಭವಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.