ADVERTISEMENT

Pahalgam attack: ಕಣಿವೆಯತ್ತ ಅಮಿತ್ ಶಾ ದೌಡು; ದಾಳಿಕೋರರ ಹೆಡೆಮುರಿ ಕಟ್ಟುವ ಪಣ

ಪಿಟಿಐ
Published 22 ಏಪ್ರಿಲ್ 2025, 14:00 IST
Last Updated 22 ಏಪ್ರಿಲ್ 2025, 14:00 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ನವದೆಹಲಿ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಪಹಲ್‌ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ನಂತರ ಶ್ರೀನಗರಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಹಲ್‌ಗಾಮ್‌ನ ಪರಿಸ್ಥಿತಿಯನ್ನು ಅಮಿತ್ ಶಾ ವಿವರಿಸಿದ್ದಾರೆ. ಅಧಿಕಾರಿಗಳು ನೀಡಿದ ಪ್ರಾಥಮಿಕ ವರದಿಯನ್ನು ಅವರಿಗೆ ತಿಳಿಸಿದ್ದಾರೆ ಎಂದೆನ್ನಲಾಗಿದೆ.

ADVERTISEMENT

‘ಭಯೋತ್ಫಾದಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬದೊಂದಿಗೆ ಈ ಕಷ್ಟಕಾಲದಲ್ಲಿ ನಾವಿದ್ದೇವೆ. ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾ ಭರವಸೆ ನೀಡಿದ್ದಾರೆ. 

ಇಂದು (ಮಂಗಳವಾರ) ಮಧ್ಯಾಹ್ನ 3ಕ್ಕೆ ಪಹಲ್‌ಗಾಮ್‌ನ ಬೈಸರನ್‌ ಕಣಿವೆ ಮೂಲಕ ಬಂದ ಭಯೋತ್ಫಾದಕರು ಅಲ್ಲಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭಯೋತ್ಫಾದಕರ ಈ ಪೈಶಾಚಿತ ಕೃತ್ಯದ ನಂತರದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಮೃತದೇಹಗಳು ಅಲ್ಲಲ್ಲಿ ಬಿದ್ದಿರುವುದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿರುವುದು ಇದರಲ್ಲಿದೆ. 

ಶಿವಮೊಗ್ಗ ವಿಜಯನಗರ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. 

ಜುಲೈ 3ರಿಂದ 38 ದಿನಗಳ ಅಮರನಾಥ ಯಾತ್ರೆ ಆರಂಭಗೊಳ್ಳುವ ಮೊದಲೇ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.

ಗಾಯಗೊಂಡವರ ರಕ್ಷಣೆಗೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.