ADVERTISEMENT

ಸತತ 11ನೇ ದಿನ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ: ಅಪ್ರಚೋದಿತ ಗುಂಡಿನ ದಾಳಿ

ಪಿಟಿಐ
Published 5 ಮೇ 2025, 4:15 IST
Last Updated 5 ಮೇ 2025, 4:15 IST
ಪಾಕ್‌ನಿಂದ ಕದನವಿರಾಮ ಉಲ್ಲಂಘನೆ; ಗುಂಡಿನ ದಾಳಿ
ಪಾಕ್‌ನಿಂದ ಕದನವಿರಾಮ ಉಲ್ಲಂಘನೆ; ಗುಂಡಿನ ದಾಳಿ   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆಯು ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

ಈ ಮೂಲಕ ಮತ್ತೊಮ್ಮೆ ಯುದ್ಧ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 22ರಂದು ಪಹಲ್ಗಾಮ್‌ನ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಉದ್ವಿಗ್ನತೆ ನಡುವೆ ಸತತ 11ನೇ ದಿನ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

ADVERTISEMENT

ಮೇ 4ರ ರಾತ್ರಿ, ಪಾಕಿಸ್ತಾನಿ ಸೇನಾ ಶಿಬಿರಗಳಿಂದ ಎಲ್‌ಒಸಿಯಾದ್ಯಂತ ಕುಪ್ವಾರ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರ್‌ಬನಿ ಮತ್ತು ಜಮ್ಮು-ಕಾಶ್ಮೀರದ ಅಖ್ನೂರ್ ಬಳಿಯ ಪ್ರದೇಶಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ ಎಂದು ಜಮ್ಮುವಿನ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಭಾರತೀಯ ಸೇನೆಯು ತ್ವರಿತವಾಗಿ ಪ್ರತ್ಯುತ್ತರ ನೀಡಿದೆ ಎಂದು ಅವರು ಹೇಳಿದ್ದಾರೆ.

ಗಡಿ ಜಿಲ್ಲೆಗಳಾದ ಜಮ್ಮು, ರಾಜೌರಿ ಮತ್ತು ಪೂಂಚ್, ಜಮ್ಮು ಪ್ರದೇಶದ ಪಿರ್ ಪಂಜಾಲ್ ಶ್ರೇಣಿ ಮತ್ತು ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಹಾಗೂ ಕುಪ್ವಾರಾಗಳಲ್ಲಿ ರಾತ್ರಿಯಿಡೀ ಗುಂಡಿನ ದಾಳಿಯನ್ನು ನಡೆಸಿವೆ ಎಂದು ವರದಿ ತಿಳಿಸಿದೆ.

ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿನ ಎಲ್‌ಒಸಿಯ ಉದ್ದಕ್ಕೂ ಹಲವು ಸೇನಾ ಪೋಸ್ಟ್‌ಗಳ ಮೇಲೆ ಸಣ್ಣ ಪ್ರಮಾಣದಲ್ಲಿ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದ ಪಾಕಿಸ್ತಾನ, ತನ್ನ ಕದನ ವಿರಾಮ ಉಲ್ಲಂಘನೆಯನ್ನು ಪೂಂಚ್, ನಂತರ ಜಮ್ಮು ಪ್ರದೇಶದ ಅಖ್ನೂರ್ ವಲಯಕ್ಕೆ ತ್ವರಿತವಾಗಿ ವಿಸ್ತರಿಸಿತು ಎಂದು ವರದಿ ತಿಳಿಸಿದೆ.

ಇದರ ನಂತರ ರಾಜೌರಿ ಜಿಲ್ಲೆಯ ಸುಂದರ್‌ಬನಿ ಮತ್ತು ನೌಶೇರಾ ಸೆಕ್ಟರ್‌ಗಳಲ್ಲಿನ ಎಲ್‌ಒಸಿ ಉದ್ದಕ್ಕೂ ಹಲವು ಪೋಸ್ಟ್‌ಗಳ ಮೇಲೆ ಗುಂಡಿನ ದಾಳಿ ನಡೆಯಿತು. ನಂತರ, ಜಮ್ಮು ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪರ್ಗ್ವಾಲ್ ವಲಯಕ್ಕೂ ವಿಸ್ತರಿಸಿತು ಎಂದು ಸೇನೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.