ADVERTISEMENT

ಗುಜರಾತ್‌ನಲ್ಲಿ ಅಂಗಡಿಗಳಿಗೆ ಬೆಂಕಿ: ಐಎಸ್‌ಐ ಪಿತೂರಿ, ಮೂವರ ಬಂಧನ

ಫೇಸ್‌ಬುಕ್ ಮೂಲಕ ಐಎಸ್ಐ ಸಂಪರ್ಕ ಪಡೆದ ಆರೋಪಿಗಳು

ಪಿಟಿಐ
Published 7 ಏಪ್ರಿಲ್ 2021, 23:09 IST
Last Updated 7 ಏಪ್ರಿಲ್ 2021, 23:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ‍ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ನಿರ್ದೇಶನದ ಮೇರೆಗೆ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಪಿತೂರಿಯ ಭಾಗವಾಗಿ ಏಳು ಅಂಗಡಿಗಳಿಗೆ ಬೆಂಕಿ ಹೆಚ್ಚಿದ್ದ ಮೂವರು ಆರೋಪಿಗಳನ್ನು ಗುಜರಾತ್ ಅಪರಾಧ ದಳದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಹಣದ ಅಗತ್ಯವಿದ್ದವರಿಗೆ ಐಎಸ್‌ಐ ಆಮಿಷವೊಡ್ಡಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಯೋಜನೆ ರೂಪಿಸಿತ್ತು ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಐಪಿಸಿಯ ನಿಬಂಧನೆಗಳು ಹಾಗೂ ಸರ್ಕಾರದ ವಿರುದ್ಧ ಪಿತೂರಿ ಮತ್ತು ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

‘ಭಾರತದಲ್ಲಿ ಐಎಸ್‌ಐ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವುದು, ದೇಶದ ಆಂತರಿಕ ಭದ್ರತೆಗೆ ಅಪಾಯವನ್ನುಂಟು ಮಾಡುವುದು, ಆರ್ಥಿಕ ನಷ್ಟವನ್ನುಂಟು ಮಾಡುವ ಐಎಸ್‌ಐ ಯೋಜನೆಗಳ ಭಾಗವಾಗಿ ಗುಜರಾತಿನಲ್ಲಿ ಅಂಗಡಿಗಳಿಗೆ ಬೆಂಕಿ ಹಚ್ಚಲು ಮೂವರು ವ್ಯಕ್ತಿಗಳಿಗೆ ಆಮಿಷ ಒಡ್ಡಲಾಗಿತ್ತು ಎಂದು ಹೆಸರು ಹೇಳಲಿಚ್ಚಿಸದ ಐಎಸ್‌ಐ ಏಜೆಂಟ್ ಒಬ್ಬ ತಿಳಿಸಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳನ್ನು ಭೂಪೇಂದ್ರ ವಂಜಾರ, ಅನಿಲ್ ಖಾತಿಕ್ ಮತ್ತು ಅಂಕಿತ್ ಪಾಲ್ ಎಂದು ಗುರುತಿಸಲಾಗಿದೆ. ಪಾಲ್‌ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಐಎಸ್‌ಐ ನಿರ್ದೇಶನದಿಂದ ತನ್ನನ್ನು ಬಾಬಾ ಬಾಯ್ ಎಂದು ಫೇಸ್‌ಬುಕ್‌ನಲ್ಲಿ ಗುರುತಿಸಿಕೊಂಡಿದ್ದ ಹಾಗೂ ಇದೇ ಹೆಸರನ್ನೇ ಹೋಲುವ ಹಲವು ಖಾತೆಗಳನ್ನೂ ಹೊಂದಿದ್ದ ವ್ಯಕ್ತಿಯೊಬ್ಬನ ಸಲಹೆ ಮೇರೆಗೆ ಮಾರ್ಚ್ 20ರ ರಾತ್ರಿ ಗುಜರಾತಿನ ಕಾಲುಪುರ್ ಪ್ರದೇಶದಲ್ಲಿ ಆರೋಪಿಗಳು ಏಳು ಅಂಗಡಿಗಳಿಗೆ ಬೆಂಕಿ ಹೆಚ್ಚಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಪ್ರೇಮ್‌ವೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಈ ಘಟನೆಯ ನಂತರ, ‘ಐಎಸ್‌ಐ ನಿರ್ದೇಶನದ ಮೇರೆಗೆ ಅಂಗಡಿಗಳಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ ಎಂದು ಗುಪ್ತಚರ ಇಲಾಖೆಯು ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ಈ ಬಗ್ಗೆ ವಿವರವಾದ ತನಿಖೆಯ ನಂತರವೇ ಆರೋಪಿಗಳನ್ನು ಬಂಧಿಸಲಾಗಿದೆ.ಕೃತ್ಯದ ಬಳಿಕ ಮೂವರು ಆರೋಪಿಗಳು ಐಎಸ್‌ಐ ಏಜೆಂಟ್‌ನಿಂದ ದುಬೈ–ಮುಂಬೈ ಮೂಲಕ ಕೊರಿಯರ್ ಮೂಲಕ ₹ 1.5 ಲಕ್ಷ ರೂಪಾಯಿ ಪಡೆದಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಫೇಸ್‌ಬುಕ್‌ನಿಂದ ಐಎಸ್‌ಐ ಸಂಪರ್ಕ
ಪ್ರಕರಣದ ಆರೋಪಿಗಳಲ್ಲೊಬ್ಬನಾದ ಭೂಪೇಂದ್ರ ವಂಜಾರ ಸಣ್ಣ ಅಪರಾಧಿಯಾಗಿದ್ದು, ಫೇಸ್‌ಬುಕ್ ಮೂಲಕ ಐಎಸ್‌ಐ ಸಂಪರ್ಕಕ್ಕೆ ಬಂದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಪ್ರೇಮ್‌ವೀರ್ ಸಿಂಗ್ ತಿಳಿಸಿದ್ದಾರೆ.

‘ಫೇಸ್‌ಬುಕ್ ಮೂಲಕವೇ ವಂಜಾರಗೆಹಣದ ಆಮಿಷವೊಡ್ಡಿದ ಬಾಬಾ ಬಾಯ್, ಜನರನ್ನು ಕೊಲ್ಲಲ್ಲು ಮತ್ತು ಅಂಗಡಿಗಳನ್ನು ಸುಟ್ಟುಹಾಕಲು ನಿರ್ದೇಶಿಸಿದ್ದಾನೆ. ಗನ್ ಖರೀದಿಸಲು ಈ ಹಿಂದೆ ವಂಜಾರ ಐಎಸ್‌ಐ ಏಜೆಂಟ್‌ನಿಂದ ಪೇಟಿಎಂ ಮೂಲಕ ₹ 25 ಸಾವಿರ ಪಡೆದಿದ್ದ’ ಎಂದೂ ಅವರು ಹೇಳಿದ್ದಾರೆ.

‘ಅಪರಾಧದ ಮನಸ್ಥಿತಿ ಹೊಂದಿರುವ ಮತ್ತು ಹಣದ ಅಗತ್ಯವಿರುವ ಜನರನ್ನು ಗುರುತಿಸಿ, ಬಾಬಾ ಬಾಯ್ ಫೇಸ್‌ಬುಕ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ’ ಎಂದು ಡಿಸಿಪಿ ಚೈತನ್ಯ ಮಾಂಡ್ಲಿಕ್ ಹೇಳಿದ್ದಾರೆ.

‘ವಂಜಾರ ಜೊತೆಗೆ ಐಎಸ್‌ಐ ಏಜೆಂಟ್ ಚಾಟ್ ಮಾಡಿರುವ ಕೆಲವು ಐಪಿ ವಿಳಾಸಗಳನ್ನು ಪತ್ತೆ ಹಚ್ಚಿದ್ದೇವೆ. ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಹಾಗೂ ಹಣದ ಮೂಲಕ ಜನರಿಗೆ ಆಮಿಷವೊಡ್ಡಿ ದೇಶದ ಆರ್ಥಿಕ ಭದ್ರತೆಗೆ ನಷ್ಟವನ್ನುಂಟು ಮಾಡುವ ವಿಷಯಗಳೂ ಇಲ್ಲಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.