ADVERTISEMENT

'ಬಂಗಾಳಿಗಳಿಗೆ ಮೀನು ಬೇಯಿಸಿಕೊಡುತ್ತೀರಾ?' ಎಂದಿದ್ದ ನಟ ಪರೇಶ್ ರಾವಲ್ ಕ್ಷಮೆಯಾಚನೆ

ಗುಜರಾತ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಹೇಳಿಕೆ

ಪಿಟಿಐ
Published 2 ಡಿಸೆಂಬರ್ 2022, 14:09 IST
Last Updated 2 ಡಿಸೆಂಬರ್ 2022, 14:09 IST
ನಟ ಪರೇಶ್ ರಾವಲ್ (ಪಿಟಿಐ ಚಿತ್ರ)
ನಟ ಪರೇಶ್ ರಾವಲ್ (ಪಿಟಿಐ ಚಿತ್ರ)   

ಮುಂಬೈ: ಗುಜರಾತ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ 'ಬಂಗಾಳಿ'ಗಳನ್ನು ಉದ್ದೇಶಿಸಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಹಿರಿಯ ನಟ ಪರೇಶ್ ರಾವಲ್ ಅವರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ.

ಗುಜರಾತ್‌ನ ವಲ್ಸದ್‌ ಜಿಲ್ಲೆಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದ ಪರೇಶ್, ಸಿಲಿಂಡರ್‌ ಬೆಲೆ ಕುರಿತು ಭಾವುಕವಾಗಿ ಮಾತನಾಡಿದ್ದರು.

'‌ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಾಗಿದೆ. ಆದರೆ, ಕಡಿಮೆಯಾಗಲಿದೆ. ಜನರು ಉದ್ಯೋಗವನ್ನೂ ಪಡೆದುಕೊಳ್ಳಲಿದ್ದಾರೆ. ಆದರೆ, ದೆಹಲಿಯಲ್ಲಿ ಇರುವಂತೆ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶನಿವಾಸಿಗಳು ನಿಮ್ಮ ಸುತ್ತಲೂ ಇದ್ದರೆ ಏನಾಗಬಹುದು? ಸಿಲಿಂಡರ್‌ಗಳನ್ನು ಇಟ್ಟುಕೊಂಡು ಏನು ಮಾಡುತ್ತೀರಿ? ಬಂಗಾಳಿಗಳಿಗೆ ಮೀನು ಬೇಯಿಸಿ ಕೊಡುತ್ತೀರಾ?' ಎಂದು ಕೇಳಿದ್ದರು.

ADVERTISEMENT

ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಮತ್ತು ರೋಹಿಂಗ್ಯಾಗಳನ್ನು ಉದ್ದೇಶಿಸಿ 'ಬಂಗಾಳಿ' ಪದ ಬಳಸಿದ್ದಕ್ಕೆ, ಪಶ್ಚಿಮ ಬಂಗಾಳ ಸಮುದಾಯದವರಿಂದ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಪರೇಶ್‌, 'ಮೀನಿನ ಅಡುಗೆ ಮಾಡಿ ತಿನ್ನುವುದುಗುಜರಾತಿಗಳಿಗೆ ಖಂಡಿತವಾಗಿಯೂ ಸಮಸ್ಯೆಯೇ ಅಲ್ಲ. ಆದರೆ, ಒಂದು ವಿಚಾರ ಸ್ಪಷ್ಟಪಡಿಸುತ್ತೇನೆ. ನಾನುಬಂಗಾಳಿ ಎಂದದ್ದು ಬಾಂಗ್ಲಾದೇಶದಿಂದ ಬಂದ ಅಕ್ರಮ ನಿವಾಸಿಗಳು ಮತ್ತು ರೋಹಿಂಗ್ಯಾಗಳನ್ನು. ಈಗಲೂ ನಿಮಗೆ ನೋವಾಗಿದ್ದರೆ, ಕ್ಷಮೆ ಕೋರುತ್ತೇನೆ' ಎಂದು ಟ್ವೀಟ್‌ ಮಾಡಿದ್ದಾರೆ.

182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಗೆ ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಮೊದಲ ಹಂತದ ಮತದಾನ ಈಗಾಗಲೇ (ಡಿಸೆಂಬರ್ 1) ಮುಗಿದಿದೆ. ಎರಡನೇ ಹಂತದ ಮತದಾನ ಡಿಸೆಂಬರ್ 5ರಂದು ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.