ADVERTISEMENT

ಜಿಲ್ಲಾ, ಮಂಡಲ ಪರಿಷತ್‌ ಚುನಾವಣೆ ಬಹಿಷ್ಕಾರದ ವಿಚಾರವಾಗಿ ಟಿಡಿಪಿಯಲ್ಲಿ ಅಸಮಾಧಾನ

ಜಿಲ್ಲಾ, ಮಂಡಲ ಪರಿಷತ್‌ ಚುನಾವಣೆ ಬಹಿಷ್ಕಾರ: ನಾಯ್ಡು ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 14:04 IST
Last Updated 3 ಏಪ್ರಿಲ್ 2021, 14:04 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ಹೈದರಾಬಾದ್‌: ಆಂಧ್ರಪ್ರದೇಶದ ಜಿಲ್ಲಾ ಮತ್ತು ಮಂಡಲ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್‌ 8ರಂದು ನಡೆಯಲಿರುವ ಮತದಾನವನ್ನು ಬಹಿಷ್ಕರಿಸಬೇಕೆಂಬ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ನಿರ್ಧಾರ, ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕೆಲವು ಹಿರಿಯ ನಾಯಕರು ಬಹಿರಂಗವಾಗಿಯೇ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಉಳಿಯಲು ಒಲವು ಹೊಂದಿದ್ದಾರೆ. ಅಭ್ಯರ್ಥಿಗಳ ಈ ನಿಲುವನ್ನು ಸ್ಥಳೀಯ ಮುಖಂಡರೂ ಬೆಂಬಲಿಸಿದ್ದಾರೆ.

ಜಿಲ್ಲಾ ಮತ್ತು ಮಂಡಲ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ನಾಯ್ಡು ಆಗ್ರಹಿಸಿದ್ದರು.

ADVERTISEMENT

‘ಚುನಾವಣಾ ಪ್ರಕ್ರಿಯೆ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದೇವೆ. ನೂತನ ರಾಜ್ಯ ಚುನಾವಣಾ ಆಯುಕ್ತೆ ನೀಲಂ ಸಾಹ್ನಿ ಅವರು ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ’ ಎಂದು ನಾಯ್ಡು ಅವರು ಶುಕ್ರವಾರ ಟೀಕಿಸಿದ್ದರು.

ಇದರ ಬೆನಲ್ಲೇ, ಪರಿಷತ್‌ಗಳಿಗೆ ನಡೆಯುವ ಮತದಾನದಿಂದ ಪಕ್ಷವು ದೂರ ಉಳಿಯಲಿದೆ ಎಂದೂ ಘೋಷಿಸಿದ್ದರು.

ನಾಯ್ಡು ಅವರಿಂದ ಇಂಥ ‘ಕಠಿಣ ನಿರ್ಧಾರ’ ಹೊರಬಿದ್ದ ಬೆನ್ನಲ್ಲೇ, ಕೇಂದ್ರದ ಮಾಜಿ ಸಚಿವರೂ ಆದ ಪಕ್ಷದ ಮುಖಂಡ ಅಶೋಕ್‌ ಗಜಪತಿರಾಜು ಅಸಮಾಧಾನ ಹೊರಹಾಕಿದ್ದಾರೆ. ‘ಇಂಥ ನಿರ್ಧಾರವನ್ನು ಘೋಷಿಸುವ ಮುನ್ನ ವರಿಷ್ಠರು ಪಕ್ಷದ ಕಾರ್ಯಕರ್ತರೊಂದಿಗೆ ಸುದೀರ್ಘ ಸಮಾಲೋಚನೆ ಮಾಡಬೇಕಿತ್ತು’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಶೋಕ್ ಗಜಪತಿರಾಜು ಅವರ ಪುತ್ರಿ ಅದಿತಿ ಗಜಪತಿರಾಜು ಸೇರಿದಂತೆ ವಿಜಯನಗರಂ ಜಿಲ್ಲೆಯ ಮುಖಂಡರು ಸಹ ನಾಯ್ಡು ಅವರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇರಲಿದ್ದಾರೆ ಎಂದು ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.