ADVERTISEMENT

ಎರಡನೇ ದಿನವೂ ಸಂಸತ್‌ ಕಲಾಪಕ್ಕೆ ಭಂಗ

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ವಿಪಕ್ಷ ಗದ್ದಲ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 23:30 IST
Last Updated 22 ಜುಲೈ 2025, 23:30 IST
<div class="paragraphs"><p>ಸಂಸತ್‌ ಮುಂಗಾರು ಅಧಿವೇಶನ</p></div>

ಸಂಸತ್‌ ಮುಂಗಾರು ಅಧಿವೇಶನ

   

ನವದೆಹಲಿ: ಬಿಹಾರದಲ್ಲಿ ಭಾರತೀಯ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಸಂಸತ್‌ನ ಒಳಗೆ ಹಾಗೂ ಹೊರಗೆ ಪ್ರತಿಧ್ವನಿಸಿತು. ಚುನಾವಣಾ ಆಯೋಗದ ಕ್ರಮ ವಿರೋಧಿಸಿ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪ ಮಂಗಳವಾರ ನಡೆಯಲಿಲ್ಲ. 

ಸಂಸತ್ ಭವನದ ‘ಮಕರ ದ್ವಾರ’ದಲ್ಲಿ ಸಂಸದರು ಪ್ರತಿಭಟನೆ ನಡೆಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾದರು. 

ADVERTISEMENT

ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದರು. ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಲೋಕಸಭಾಧ್ಯಕ್ಷ ಓಂಬಿರ್ಲಾ ಹಾಗೂ ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ಮನವಿ ಮಾಡಿದರು. ಇದಕ್ಕೆ ವಿಪಕ್ಷಗಳ ಸದಸ್ಯರು ಕಿವಿಗೊಡಲಿಲ್ಲ. ಶೂನ್ಯ ವೇಳೆ ಮತ್ತು ಪ್ರಶ್ನೋತ್ತರ ಅವಧಿಯಲ್ಲಿ ಕಲಾಪವನ್ನು ಎರಡು ಸಲ ಮುಂದೂಡಲಾಯಿತು. 

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ರಾಜೀನಾಮೆ ನೀಡಿದ್ದರಿಂದ ಮಂಗಳವಾರ ಎಲ್ಲರ ಕಣ್ಣು ರಾಜ್ಯಸಭೆಯ ಮೇಲಿತ್ತು. ಉಪಸಭಾಪತಿ ಹರಿವಂಶ್‌, ‘ಸಭಾಧ್ಯಕ್ಷರ ಹುದ್ದೆ ಖಾಲಿಯಾಗಿದೆ’ ಎಂದು ಸದನಕ್ಕೆ ತಿಳಿಸಿದರು. ಎಸ್ಐಆರ್‌ ಕುರಿತು ಚರ್ಚಿಸಲು ಕೂಡಲೇ ಅವಕಾಶ ನೀಡಬೇಕೆಂಬ ವಿರೋಧ ಪಕ್ಷಗಳ ಮನವಿಯನ್ನು ತಿರಸ್ಕರಿಸಿದರು. 

ಉಪರಾಷ್ಟ್ರಪತಿಯವರ ಅನಿರೀಕ್ಷಿತ ರಾಜೀನಾಮೆ ಕುರಿತು ತಕ್ಷಣ ಚರ್ಚಿಸಲು ಅವಕಾಶ ನೀಡಬೇಕೆಂಬ ಸಿಪಿಐನ ಪಿ. ಸಂದೋಷ್ ಕುಮಾರ್ ಅವರ ನೋಟಿಸ್ ಅನ್ನು ಸಹ ತಿರಸ್ಕರಿಸಲಾಯಿತು.

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟಿಸಿ ಸಭಾಪತಿಯವರ ಪೀಠದ ಎದುರು ಧಾವಿಸಿದರು. ಹರಿವಂಶ್ ಅವರು ಮಧ್ಯಾಹ್ನ 12 ಗಂಟೆಯವರೆಗೆ ಕಲಾಪ ಮುಂದೂಡಿದರು. ಪ್ರಶ್ನೋತ್ತರ ಅವಧಿಗೆ ಸದನ ಮತ್ತೆ ಸೇರಿದಾಗ, ಕಲಾಪ ಅಧ್ಯಕ್ಷತೆ ವಹಿಸಿದ್ದ ಘನಶ್ಯಾಮ್ ತಿವಾರಿ, ‘ಧನಕರ್‌  ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ವೀಕರಿಸಲಾಗಿದೆ ಎಂಬ ಗೃಹ ಸಚಿವಾಲಯದ ಅಧಿಸೂಚನೆಯ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು. ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು. ಮಧ್ಯಾಹ್ನ ನಂತರವೂ ಕಲಾಪ ನಡೆಯಲಿಲ್ಲ. 

ಲೋಕಸಭೆಯಲ್ಲಿ ಕಲಾಪ ನಡೆಸಲು ಸಹಕಾರ ನೀಡುವಂತೆ ಬಿರ್ಲಾ ಹಾಗೂ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಕೋರಿದರು. ಇದಕ್ಕೆ ವಿಪಕ್ಷಗಳ ಸದಸ್ಯರು ಒಪ್ಪಲಿಲ್ಲ. 12 ಗಂಟೆ ವರೆಗೆ ಕಲಾಪ ಮುಂದೂಡಲಾಯಿತು. ‘ಪ್ರಶ್ನೋತ್ತರ ಅವಧಿಯಲ್ಲಿ ರೈತರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಸದಸ್ಯರು ತಮ್ಮ ಸ್ಥಾನಗಳಿಗೆ ವಾಪಸಾಗಬೇಕು’ ಎಂದು ಚೌಹಾಣ್‌ ಮನವಿ ಮಾಡಿದರು. ‘ಘೋಷಣೆಗಳನ್ನು ಕೂಗಿ ಫಲಕಗಳನ್ನು ಪ್ರದರ್ಶಿಸುವುದರಿಂದ ಸದನದ ಘನತೆ ಕುಗ್ಗುತ್ತದೆ’ ಎಂದು ಬಿರ್ಲಾ ಅಸಮಾಧಾನ ವ್ಯಕ್ತಪಡಿಸಿದರು. 

ಮಧ್ಯಾಹ್ನದ ನಂತರ ಕಲಾಪ ಆರಂಭವಾದಾಗ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ದ್ವಿಮುಖ ನೀತಿ ತಪ್ಪು. ಒಂದೆಡೆ ಅವರು ಚರ್ಚೆ ನಡೆಸಬೇಕೆಂದು ಕೇಳುತ್ತಾರೆ ಮತ್ತು ನಂತರ ಈ ರೀತಿಯ ಗದ್ದಲ ನಡೆಸುತ್ತಾರೆ’ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.