ADVERTISEMENT

ಪಕ್ಷಗಳು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು: ಕೋವಿಂದ್ ವಿದಾಯ ಭಾಷಣ

ಐಎಎನ್ಎಸ್
Published 24 ಜುಲೈ 2022, 5:09 IST
Last Updated 24 ಜುಲೈ 2022, 5:09 IST
ರಾಷ್ಟ್ರಪತಿ ರಾಮನಾಥ ಕೋವಿಂದ್ (ಪಿಟಿಐ ಚಿತ್ರ)
ರಾಷ್ಟ್ರಪತಿ ರಾಮನಾಥ ಕೋವಿಂದ್ (ಪಿಟಿಐ ಚಿತ್ರ)   

ನವದೆಹಲಿ: ರಾಜಕೀಯ ಪಕ್ಷಗಳು ಪಕ್ಷಪಾತ ಧೋರಣೆಯಿಂದ ಹೊರಬರಬೇಕು ಮತ್ತು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಹೇಳಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಜನತೆಗೆ ಮತ್ತು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತದ್ದಕ್ಕೆ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ.

ರಾಷ್ಟ್ರಪತಿ ಹಾಗೂಉಭಯ ಸದನಗಳನ್ನೊಳಗೊಂಡಸಂಸತ್ತಿಗೆ ಅವಕಾಶ ಕಲ್ಪಿಸುವ ಸಂವಿಧಾನದ 79ನೇ ವಿಧಿಯನ್ನು ಉಲ್ಲೇಖಿಸಿದ ಕೋವಿಂದ್‌, 'ಈ ಸಾಂವಿಧಾನಿಕ ನಿಬಂಧನೆಗೆ ಅನುಗುಣವಾಗಿ, ರಾಷ್ಟ್ರಪತಿ ಸ್ಥಾನವನ್ನು ಸಂಸದೀಯ ಕುಟುಂಬದ ಅವಿಭಾಜ್ಯ ಅಂಗವೆಂದು ಭಾವಿಸುತ್ತೇನೆ. ಯಾವುದೇ ಕುಟುಂಬವಿರಲಿ, ಭಿನ್ನಾಭಿಪ್ರಾಯಗಳಿರುವಂತೆ, ಸಂಸದೀಯ ಕುಟುಂಬದಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಅವು ಹೇಗೆ ಮುನ್ನಡೆಯಬೇಕು ಎಂಬುದಕ್ಕೆ ಸಂಬಂಧಿಸಿದ್ದವುಗಳಾಗಿವೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಕುಟುಂಬವಾಗಿಯೇ ಉಳಿದಿದ್ದೇವೆ. ರಾಷ್ಟ್ರದ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಕ್ಷ ಸಂಘಟನೆಗಳ ಮೂಲಕ ರಾಜಕೀಯ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ, ‍ಪಕ್ಷಗಳು ಪಕ್ಷದ ಪರವಾದ ನಿಲುವುಗಳಿಂದ ಹೊರಬರಬೇಕು. ದೇಶ ಮೊದಲು ಎಂಬ ಧೋರಣೆಯೊಂದಿಗೆ, ಸಾಮಾನ್ಯ ಜನರಿಗೆ, ಮಹಿಳೆಯರಿಗೆ ಯಾವುದು ಒಳಿತು, ಯಾವುದು ಅತ್ಯಗತ್ಯ ಎಂಬುದನ್ನು ಪರಿಗಣಿಸಬೇಕು' ಎಂದು ಸಲಹೆ ನೀಡಿದ್ದಾರೆ.

ಇಡೀ ದೇಶವನ್ನು ಒಂದು ಕುಟುಂಬವೆಂದು ಪರಿಗಣಿಸಿದಾಗ ಮಾತ್ರ, ಯಾವುದೇ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಮತ್ತು ಸಾಮರಸ್ಯದಿಂದ ಪರಿಹರಿಸಬಹುದು ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮಾತನಾಡಿರುವ ರಾಷ್ಟ್ರಪತಿ, 'ದೇಶದ ನಾಗರಿಕರು ಮತ್ತು ರಾಜಕೀಯ ಪಕ್ಷಗಳಿಗೆ‍ ಪ್ರತಿಭಟನೆಯೂಸೇರಿದಂತೆ ಅನೇಕ ಸಾಂವಿಧಾನಿಕ ಅವಕಾಶಗಳು ಮುಕ್ತವಾಗಿವೆ. ನಮ್ಮ ರಾಷ್ಟ್ರಪಿತ (ಮಹಾತ್ಮ ಗಾಂಧಿ) ಸಹ ಉದ್ದೇಶಗಳ ಈಡೇರಿಕೆಗಾಗಿ ಅಂತಿಮವಾಗಿ ಸತ್ಯಾಗ್ರಹದ ಅಸ್ತ್ರವನ್ನು ಬಳಸುತ್ತಿದ್ದರು. ಆದರೆ, ಅವರಿಗೆ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಕಳಕಳಿ ಇತ್ತು. ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟಿಸುವ ಹಕ್ಕು ನಾಗರಿಕರಿಗೆ ಇದೆ. ಆದರೆ, ಅದು ಯಾವಾಗಲೂ ಶಾಂತಿಯುತವಾಗಿ, ಗಾಂಧಿ ಮಾರ್ಗದಲ್ಲಿರಬೇಕು' ಎಂದು ಪ್ರತಿಪಾದಿಸಿದ್ದಾರೆ.

'ಮೂಲಭೂತ ಅಗತ್ಯತೆಗಳು ಪೂರೈಕೆಯಾಗುತ್ತಿದ್ದಂತೆ, ಜನರ ಆಕಾಂಕ್ಷೆಗಳೂ ಬದಲಾಗುತ್ತಿವೆ. ದೇಶದ ಸಾಮಾನ್ಯ ವರ್ಗದ ಜನರ ಕನಸುಗಳಿಗೆ ಇದೀಗ ರೆಕ್ಕೆಗಳು ಬಂದಿವೆ. ಇದು ಯಾವುದೇ ತಾರತಮ್ಯವಿಲ್ಲದ ಉತ್ತಮ ಆಡಳಿತದಿಂದ ಸಾಧ್ಯವಾಗಿದೆ. ಈ ಸರ್ವತೋಮುಖ ಪ್ರಗತಿಯು ಬಾಬಾಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಆಗಿದೆ' ಎಂದೂ ಹೇಳಿದ್ದಾರೆ.

ಚುನಾಯಿತ ಪ್ರತಿನಿಧಿಗಳ ಬೆಂಬಲ ಇಲ್ಲದಿದ್ದರೆ, ತಾವು ದೇಶದ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಸ್ಮರಿಸಿರುವ ಕೋವಿಂದ್‌, ಸಂಸದರು ಮತ್ತು ವಿವಿಧ ಕ್ಷೇತ್ರಗಳ ನಿಯೋಗಗಳ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕಾಗಿಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಿಗೆ ಧನ್ಯವಾದ ಹೇಳಿದ್ದಾರೆ.

ಬೀಳ್ಕೊಡುಗೆ ಸಮಾರಂಭದಲ್ಲಿ ರಾಮನಾಥ ಕೋವಿಂದ್ ಭಾಷಣ (ಪಿಟಿಐ ಚಿತ್ರ)
ರಾಷ್ಟ್ರಪತಿ ಕೋವಿಂದ್‌ ಅವರಿಗೆ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ,ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು (ಪಿಟಿಐ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.