ನವದೆಹಲಿ: ಭಯೋತ್ಪಾದಕರ ವಿರುದ್ಧ ಗೂಢಚರ್ಯೆ ತಂತ್ರಾಂಶ (ಸ್ಪೈವೇರ್) ಬಳಸುವುದರಲ್ಲಿ ತಪ್ಪೇನಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದ್ದು, ದೇಶದ ‘ಭದ್ರತೆ ಮತ್ತು ಸಾರ್ವಭೌಮತ್ವ’ಕ್ಕೆ ಸಂಬಂಧಿಸಿದ ಯಾವುದೇ ವರದಿಯನ್ನು ಬಹಿರಂಗಪಡಿಸುವಂತಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ಖಾಸಗಿತನದ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಯಾರಿಗಾದರೂ ಆತಂಕ ಇದ್ದರೆ ಅದನ್ನು ಬಗೆಹರಿಸಬಹುದು ಎಂದು ಹೇಳಿತು. ಆದರೆ, ಭದ್ರತೆಗೆ ಸಂಬಂಧಿಸಿದ ವರದಿಯನ್ನು ಬೀದಿಗಳಲ್ಲಿ ಚರ್ಚಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.
‘ದೇಶದ ಭದ್ರತೆಗೆ ಸಂಬಂಧಿಸಿದ ಯಾವುದೇ ವರದಿಯನ್ನು ಪರಿಶೀಲನೆಗೆ ಒಳಪಡಿಸುವುದಿಲ್ಲ. ಆದರೆ ಆ ವರದಿಯಲ್ಲಿ ತಮ್ಮ ಕುರಿತಾದ ಏನಾದರೂ ಅಂಶಗಳು ಇವೆಯೇ ಎಂದು ತಿಳಿಯಲು ಬಯಸುವ ವ್ಯಕ್ತಿಗಳಿಗೆ ಆ ಬಗ್ಗೆ ಮಾಹಿತಿ ನೀಡಬಹುದು’ ಎಂದು ಹೇಳಿತು.
ಪೆಗಾಸಸ್ ಗೂಢಚರ್ಯೆ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಇಸ್ರೇಲ್ನ ಪೆಗಾಸಸ್ ಸ್ಪೈವೇರ್ ಬಳಸಿ ಹಲವು ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರ ಮೇಲೆ ಕಾನೂನು ಬಾಹಿರವಾಗಿ ಕಣ್ಗಾವಲು ಇರಿಸಲಾಗಿತ್ತು ಎಂಬ ಆರೋಪವು 2021ರಲ್ಲಿ ಬಂದಿತ್ತು.
ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಕೋರ್ಟ್ ನೇಮಕ ಮಾಡಿದ್ದ ಸಮಿತಿಯೊಂದು, ವರದಿ ಸಲ್ಲಿಸಿತ್ತು. ತಾಂತ್ರಿಕ ಸಮಿತಿಯ ವರದಿಯನ್ನು ಎಷ್ಟರ ಮಟ್ಟಿಗೆ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲ ದಿನೇಶ್ ದ್ವಿವೇದಿ, ‘ಸರ್ಕಾರದ ಬಳಿ ಸ್ಪೈವೇರ್ ಇದೆಯೇ ಮತ್ತು ಅದನ್ನು ಬಳಸಲಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಸರ್ಕಾರದ ಬಳಿ ಸ್ಪೈವೇರ್ ಇದ್ದರೆ, ಅದನ್ನು ಈಗಲೂ ಬಳಸುತ್ತಿರಬಹುದು’ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ನಿರ್ದಿಷ್ಟ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದರ ಬಗ್ಗೆ ಮಾತ್ರ ಮನವಿ ಮಾಡಿ. ಈ ವಿಚಾರದಲ್ಲಿ ನಾವು ಸ್ವಲ್ಪ ಜವಾಬ್ದಾರಿಯಿಂದ ಇರೋಣ. ವರದಿಯನ್ನು ಎಷ್ಟು ಪ್ರಮಾಣದಲ್ಲಿ ಹಂಚಿಕೊಳ್ಳಬಹುದು ಎಂಬುದನ್ನು ನಿರ್ಧರಿಸುತ್ತೇವೆ’ ಎಂದಿತು.
‘ಸರ್ಕಾರವು ಭಯೋತ್ಪಾದಕರ ವಿರುದ್ಧ ಸ್ಪೈವೇರ್ ಬಳಸಿದರೆ ತಪ್ಪೇನು? ಸ್ಪೈವೇರ್ ಹೊಂದಿರುವುದು ತಪ್ಪಲ್ಲ, ನೀವು ಅದನ್ನು ಯಾರ ವಿರುದ್ಧ ಬಳಸುವಿರಿ ಎಂಬುದು ಇಲ್ಲಿರುವ ಪ್ರಶ್ನೆ. ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಜನರ ಖಾಸಗಿತನದ ಹಕ್ಕುಗಳಿಗೆ ಸಂವಿಧಾನದ ಅಡಿ ರಕ್ಷಣೆ ನೀಡಲಾಗುತ್ತದೆ’ ಎಂದು ಹೇಳಿದ ಪೀಠ ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ನಿಗದಿಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.