ADVERTISEMENT

ಬೇಜವಾಬ್ದಾರಿತನಕ್ಕೆ ಜನಾದೇಶ ಪರವಾನಗಿಯಲ್ಲ: ಸ್ಟೇಡಿಯಂ ಮರುನಾಮಕರಣಕ್ಕೆ ಸೇನಾ ಕಿಡಿ

ಪಿಟಿಐ
Published 26 ಫೆಬ್ರುವರಿ 2021, 7:47 IST
Last Updated 26 ಫೆಬ್ರುವರಿ 2021, 7:47 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ – ಪಿಟಿಐ ಚಿತ್ರ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ – ಪಿಟಿಐ ಚಿತ್ರ   

ಮುಂಬೈ: ಗುಜರಾತ್‌ನ ಮೊಟೆರಾ ಸರ್ದಾರ್ ಪಟೇಲ್ ಕ್ರೀಡಾಂಗಣಕ್ಕೆ ‘ನರೇಂದ್ರ ಮೋದಿ ಕ್ರೀಡಾಂಗಣ’ ಎಂದು ಮರುನಾಮಕರಣ ಮಾಡಿರುವುದಕ್ಕೆ ಶಿವಸೇನಾ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದ್ದು, ‘ಮೋದಿ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ದೊರೆತ ಅಭೂತಪೂರ್ವ ಜಾನಾದೇಶವು ಬೇಜವಾಬ್ದಾರಿಯಿಂದ ವರ್ತಿಸಲು ದೊರೆತ ಪರವಾನಗಿಯಲ್ಲ’ ಎಂದು ಉಲ್ಲೇಖಿಸಲಾಗಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಇತಿಹಾಸದಿಂದ ಅಳಿಸಲು ಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಗಾಂಧಿ–ನೆಹರು ಕುಟುಂಬದ ವಿರುದ್ಧ ಕಳೆದ ಐದು ವರ್ಷಗಳಿಂದ ಆರೋಪ ಮಾಡಲಾಗುತ್ತಿದೆ. ನಿಜವಾಗಿ ಹಾಗೆ ಮಾಡಲು ಯಾರು ಯತ್ನಿಸುತ್ತಿದ್ದಾರೆ ಎಂಬುದನ್ನು ಕ್ರೀಡಾಂಗಣದ ಮರುನಾಮಕರಣವು ಬಹಿರಂಗಪಡಿಸಿದೆ ಎಂದು ಸೇನಾ ಹೇಳಿದೆ.

‘ದೊಡ್ಡ ಯೋಜನೆಗಳನ್ನು ಗುಜರಾತ್‌ನಲ್ಲೇ ಮಾಡಬೇಕೆಂದು ಮೋದಿ–ಶಾ ಸರ್ಕಾರ ಬಯಸಿದಂತಿದೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ತಾವು ದೇಶವನ್ನು ಮುನ್ನಡೆಸುತ್ತಿದ್ದೇವೆ ಎಂಬುದನ್ನು ಅವರು ಮರತಂತಿದೆ. ಮೊಟೆರಾ ಕ್ರೀಡಾಂಗಣದ ಹೆಸರು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಬದಲಾಗಿದೆ. ಈವರೆಗೆ ಮೆಲ್ಬರ್ನ್ ಕ್ರೀಡಾಂಗಣ ವಿಶ್ವದಲ್ಲೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿತ್ತು. ಈಗ ನರೇಂದ್ರ ಮೋದಿಯವರ ಹೆಸರು ದೊಡ್ಡದಾಗಿದೆ’ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ಮೋದಿ ಉತ್ತಮ ನಾಯಕ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಅವರ ಅಂಧ ಬೆಂಬಲಿಗರು ಅವರು ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಪಂಡಿತ್ ನೆಹರು, ಇಂದಿರಾ ಗಾಂಧಿಗಿಂತಲೂ ದೊಡ್ಡವರು ಎಂದು ಭಾವಿಸಿದ್ದಾರೆ. ಇದು ಕುರುಡು ನಂಬಿಕೆಯ ಪರಮಾವಧಿ ಎಂದು ಸೇನಾ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.