ADVERTISEMENT

ದೆಹಲಿ ಶ್ರದ್ಧಾ ಹತ್ಯೆ ಸಮರ್ಥಿಸಿದ್ದ ವ್ಯಕ್ತಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2022, 9:55 IST
Last Updated 25 ನವೆಂಬರ್ 2022, 9:55 IST
   

ಲಕ್ನೊ:ತನ್ನನ್ನು ಮುಸ್ಲಿಂ ಎಂದು ಬಿಂಬಿಸಿಕೊಂಡು ಶ್ರದ್ಧಾ ವಾಲಕರ್‌ ಹತ್ಯೆ ವಿಷಯದಲ್ಲಿ ಆಫ್ತಾಬ್‌ ಅಮೀನ್‌ ಪೂನಾವಾಲಾನನ್ನು ಸಮರ್ಥಿಸಿಕೊಂಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸಿಕಂದ್ರಾಬಾದ್‌ನ ವಿಕಾಸ್‌ ಕುಮಾರ್‌ ಬಂಧಿತ ವ್ಯಕ್ತಿ. ಈತ ಶ್ರದ್ಧಾ ಹತ್ಯೆ ಪ್ರಕರಣದ ಕುರಿತು ದೆಹಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ತನ್ನನ್ನು ರಶೀದ್‌ ಖಾನ್‌ ಎಂದು ಬಿಂಬಿಸಿಕೊಂಡಿದ್ದ.

ಆಫ್ತಾಬ್ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದ ಈತ, ಇಂತಹ ಘಟನೆಗಳು ಕೋಪದಿಂದ ನಡೆಯುತ್ತವೆ ಮತ್ತು ಶ್ರದ್ಧಾ ದೇಹ ಕೇವಲ 35 ಅಲ್ಲ, 36 ತುಣುಕುಗಳಾಗಿರಬಹುದು ಎಂದು ವ್ಯಂಗ್ಯವಾಡಿದ್ದ. ನೀವೂ ಕೂಡ ಈ ರೀತಿ ಮಾಡುತ್ತೀರ ಎಂದು ಕೇಳಿದಾಗ, ಜನರು ಕೋಪದಲ್ಲಿ ಇಂತಹ ಕೆಲಸಗಳನ್ನು ಮಾಡುತ್ತಾರೆ ಮತ್ತು ಇದು ದೊಡ್ಡ ವಿಷಯವೇನಲ್ಲ ಎಂದಿದ್ದ.

ADVERTISEMENT

‘ವಿಕಾಸ್‌ ಅಪರಾಧ ಹಿನ್ನೆಲೆ ಹೊಂದಿದ್ದಾನೆ. ಬುಲಹಂದರ್‌ಶಹರ್‌ ಮತ್ತು ನೋಯ್ಡಾದಲ್ಲಿ ಈತನ ವಿರುದ್ಧ ಕಳ್ಳತನ ಮತ್ತು ಅಕ್ರಮ ಆಯುಧ ಸರಬರಾಜು ಪ್ರಕರಣಗಳಿವೆ’ ಎಂದು ಬುಲಹಂದರ್‌ಶಹರ್‌ ಎಸ್‌ಪಿ ಶ್ಲೋಕ್‌ ಕುಮಾರ್‌ ಹೇಳಿದ್ದಾರೆ.

‘ನನ್ನನ್ನು ಇಲ್ಲಿ ಅಥವಾ ಜೈಲಿನಲ್ಲಿ ಸಾಯಿಸುತ್ತಾರೆ ಎಂಬ ಭಯದಲ್ಲಿರುವೆ’ ಎಂದು ವಿಕಾಸ್‌ ಬಂಧನದ ಬಳಿಕ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.