ನವದೆಹಲಿ: ಅಪಾರ ಸಂಖ್ಯೆಯಲ್ಲಿ ಲಗ್ಗೆ ಹಾಕುತ್ತಿರುವ ಮಿಡತೆಗಳನ್ನು ನಿಯಂತ್ರಿಸಲು ಡ್ರೋನ್ಗಳು, ಟ್ರ್ಯಾಕ್ಟರ್ಗಳು ಮತ್ತು ಅಗ್ನಿಶಾಮಕ ವಾಹನಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸುವ ಕಾರ್ಯವನ್ನುಕೇಂದ್ರ ಸರ್ಕಾರ ಕೈಗೊಂಡಿದೆ.
ನಾಲ್ಕು ರಾಜ್ಯಗಳ 43 ಜಿಲ್ಲೆಗಳಿಗೆ ಮಿಡತೆಗಳು ಧಾವಿಸಿದ್ದು, ಹೂವು, ಬೆಳೆಗಳ ಎಲೆಗಳು ಮತ್ತು ತರಕಾರಿಗಳನ್ನು ತಿಂದು ನಾಶಪಡಿಸುತ್ತಿವೆ.
‘1993ರಲ್ಲಿ ಈ ರೀತಿ ಗುಂಪುಗಳಲ್ಲಿ ಮಿಡತೆಗಳು ಲಗ್ಗೆ ಹಾಕಿದ್ದವು. ರಾಜಸ್ಥಾನದ ಚೋಮುದಲ್ಲಿ ಡ್ರೋನ್ಗಳನ್ನು ನಿಯೋಜಿಸಲಾಗಿದೆ. ಮಧ್ಯಪ್ರದೇಶದ ಕೆಲ ಭಾಗಗಳಲ್ಲಿಯೂ ಡ್ರೋನ್ಗಳನ್ನು ಬಳಸಲಾಗುವುದು’ ಎಂದು ಕೃಷಿ ಸಚಿವಾಲಯದ ಸಸಿ ರಕ್ಷಣೆ ಮತ್ತು ಸಂಗ್ರಹ ವಿಭಾಗದ ಉಪನಿರ್ದೇಶಕ ಕೆ.ಎಲ್. ಗುರ್ಜರ್ ತಿಳಿಸಿದ್ದಾರೆ.
‘47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಿಡತೆ ನಿಯಂತ್ರಣಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸದ್ಯ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 8ರಿಂದ 10 ಗುಂಪುಗಳಿವೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗುಜರಾತ್, ಪಂಜಾಬ್ ಮತ್ತು ಉತ್ತರ ಪ್ರದೇಶಕ್ಕೂ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಜೈಪುರದಲ್ಲಿ ಮೊದಲು ಅಪಾರ ಸಂಖ್ಯೆಯಲ್ಲಿ ಧಾವಿಸಿದ ಮಿಡತೆಗಳು ಬಳಿಕ ಗಾಳಿಯ ದಿಕ್ಕಿಗೆ ಮಹಾರಾಷ್ಟ್ರದ ಅಮರಾವತಿಯತ್ತ ತೆರಳುತ್ತಿವೆ. ಮಿಡತೆಗಳು ಪ್ರತಿ ದಿನ 150 ಕಿ.ಮೀ ದೂರ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸಂಜೆ ವೇಳೆಗೆ ಗಿಡಗಳು ಅಥವಾ ಜಮೀನುಗಳಲ್ಲಿ ವಾಸಿಸುತ್ತವೆ. ಗಾಳಿಯ ದಿಕ್ಕಿನ ಮೇಲೆಯೂ ಇವುಗಳ ಚಲಿಸುವ ಸಾಮರ್ಥ್ಯ ಅವಲಂಬನೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.