ನವದೆಹಲಿ: ಸೆಂಟ್ರಲ್ ವಿಸ್ತಾ ನಿರ್ಮಾಣ ಯೋಜನೆ ಸ್ಥಗಿತಗೊಳಿಸಲು ಆರಂಭದಿಂದಲೂ ಹಲವು ಪ್ರಯತ್ನಗಳು ನಡೆಯುತ್ತಿದ್ದು, ಈಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಅಂಥ ಪ್ರಯತ್ನಗಳ ಮುಂದುವರಿದ ಭಾಗವಾಗಿದೆ ಎಂದುಕೇಂದ್ರ ಸರ್ಕಾರ, ದೆಹಲಿ ಹೈ ಕೋರ್ಟ್ಗೆ ತಿಳಿಸಿದೆ.
ರಾಷ್ಟ್ರರಾಜಧಾನಿ ದೆಹಲಿಯಾದ್ಯಂತ ಮೆಟ್ರೊ ಸೇರಿದಂತೆ ವಿವಿಧ ರೀತಿಯ ನಿರ್ಮಾಣ ಕಾರ್ಯಗಳನ್ನು ಹಲವು ಏಜೆನ್ಸಿಗಳು ಕೈಗೊಂಡಿವೆ. ಅವೆಲ್ಲವನ್ನೂ ಬಿಟ್ಟು ಅರ್ಜಿದಾರರು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾದ ಸೆಂಟ್ರಲ್ ವಿಸ್ತಾದಂತಹ ಯೋಜನೆ ವಿರುದ್ಧ ಮಾತ್ರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದರೆ, ಅರ್ಜಿಯ ಹಿಂದಿನ ‘ಉದ್ದೇಶಗಳು ಮತ್ತು ಕಾರಣ‘ ಎರಡೂ ಸ್ಪಷ್ಟವಾಗಿದೆ ಎಂದು ಕೇಂದ್ರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆರೋಪಿಸಿದೆ.
ಮುಖ್ಯನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮಿತ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠದ ಎದುರುಪಟ್ಟಿ ಮಾಡಲಾಗಿರುವ ಪ್ರಕರಣಗಳ ಪಟ್ಟಿಗೆ ಈ ಪ್ರಮಾಣಪತ್ರ ಇನ್ನೂ ಸೇರ್ಪಡೆಯಾಗಿಲ್ಲ. ನ್ಯಾಯಪೀಠ ಈ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.