ಪಿತೋರಗಢ (ಉತ್ತರಾಖಂಡ): ಆದಿ ಕೈಲಾಸ ಯಾತ್ರೆ ಶುಕ್ರವಾರ ಆರಂಭವಾಗಿದ್ದು, ಯಾತ್ರಿಕರ ಮೊದಲ ಬ್ಯಾಚ್ ಬೆಟ್ಟ ಹತ್ತಿ ದೇವರ ದರ್ಶನಕ್ಕೆ ತೆರಳಿದೆ.
ಶಿವ–ಪಾರ್ವತಿ ದೇಗುಲ ಇದಾಗಿದ್ದು, ಬೆಟ್ಟದಿಂದ 2 ಕಿ.ಮೀ ದೂರದಲ್ಲಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ರಂಗ್ ಸಮುದಾಯದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ದೇಗುಲವನ್ನು ತೆರೆದಿದ್ದರು.
ದೇವಾಲಯದ ಬಾಗಿಲು ತೆರೆಯುವಾಗ 150 ಮಂದಿ ರಂಗ್ ಗ್ರಾಮಸ್ಥರು ಸೇರಿದಂತೆ 200ಕ್ಕೂ ಹೆಚ್ಚು ಭಕ್ತರು ಹಾಜರಿದ್ದರು ಎಂದು ಉತ್ತರಾಖಂಡದ ಪಿಥೋರಗಢ ಪಟ್ಟಣದ ಭಕ್ತ ಕಾರ್ತಿಕ್ ಭಾಟಿಯಾ ತಿಳಿಸಿದ್ದಾರೆ.
ವ್ಯಾಸ ಕಣಿವೆಯ ಕುಟಿ ಗ್ರಾಮದ ಅರ್ಚಕರಾದ ಗೋಪಾಲ್ ಸಿಂಗ್ ಕುಟಿಯಾಲ್ ಮತ್ತು ವೀರೇಂದ್ರ ಸಿಂಗ್ ಕುಟಿಯಾಲ್ ಅವರು ರಂಗ್ ಬುಡಕಟ್ಟು ಸಂಪ್ರದಾದಂತೆ ದೇವಾಲಯದ ಬಾಗಿಲು ತೆರೆದರು ಎಂದು ಧಾರ್ಚುಲಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಂಜಿತ್ ಸಿಂಗ್ ತಿಳಿಸಿದ್ದಾರೆ.
ಈ ವೇಳೆ ಪುರೋಹಿತರು ಸಾಂಪ್ರದಾಯಿಕ ಉಡುಪು ಧರಿಸಿದ್ದರು. ವ್ಯಾಸ ಕಣಿವೆಯ ರಂಗ್ ಹಳ್ಳಿಗಳ ಜನ ಶಿವ ಮತ್ತು ಪಾರ್ವತಿ ದೇವಿಯನ್ನು ಸ್ತುತಿಸುವ ಜಾನಪದ ಗೀತೆಗಳನ್ನು ಹಾಡಿದರು. ಈ ಸಂದರ್ಭದಲ್ಲಿ ವ್ಯಾಸ ಕಣಿವೆಯ 6 ಹಳ್ಳಿಗಳ ಜನ ಸೇರಿದಂತೆ 1,500ಕ್ಕೂ ಹೆಚ್ಚು ಭಕ್ತರು ಉಪಸ್ಥಿತರಿದ್ದರು ಎಂದು ಎಸ್ಡಿಎಂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.