ನವದೆಹಲಿ: ಕೋವಿಡ್–19 ರೋಗಿಗಳ ಚಿಕಿತ್ಸೆಗೆ ನೆರವಾಗಲು ನಗರದಲ್ಲಿ ‘ಪ್ಲಾಸ್ಮಾ ಬ್ಯಾಂಕ್’ ಆರಂಭಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ತಿಳಿಸಿದರು.
‘ಇನ್ನೆರಡು ದಿನಗಳಲ್ಲಿ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ. ಸರ್ಕಾರವು ಈವರೆಗೆ 29 ರೋಗಿಗಳ ಮೇಲೆ ಪ್ಲಾಸ್ಮಾ ಚಿಕಿತ್ಸೆಯ ಪ್ರಯೋಗ ನಡೆಸಿದ್ದು, ಪ್ರೋತ್ಸಾಹದಾಯಕ ಫಲಿತಾಂಶ ಲಭಿಸಿದೆ. ತಮ್ಮ ಪ್ಲಾಸ್ಮಾವನ್ನು ದಾನವಾಗಿ ನೀಡುವಂತೆ ಕೋವಿಡ್ಗೆ ಒಳಗಾಗಿ ಗುಣಮುಖರಾದವರಲ್ಲಿ ಆಮ್ ಆದ್ಮಿ ಪಕ್ಷವು ಮನವಿ ಮಾಡಲಿದೆ. ಪ್ಲಾಸ್ಮಾ ದಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ ನೀಡುವ ಸಲುವಾಗಿ ಸಹಾಯವಾಣಿಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು’ ಎಂದು ಆನ್ಲೈನ್ ಮೂಲಕ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ತಿಳಿಸಿದರು.
ಕೋವಿಡ್ನಿಂದ ಭಾನುವಾರ ಮೃತಪಟ್ಟಿದ್ದ ವೈದ್ಯ ಡಾ. ಅಸೀಮ್ ಗುಪ್ತಾ (52) ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುವುದುಎಂದು ಕೇಜ್ರಿವಾಲ್ ತಿಳಿಸಿದರು.
ಗುಪ್ತಾ ಅವರು ಮುಂಚೂಣಿಯ ಕೊರೊನಾ ಯೋಧರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸ್ವತಃ ಸೋಂಕಿಗೆ ಒಳಗಾಗಿ ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.