ADVERTISEMENT

ದೆಹಲಿ ಬಜೆಟ್ ನಿಲ್ಲಿಸಬೇಡಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ

ಪಿಟಿಐ
Published 21 ಮಾರ್ಚ್ 2023, 5:12 IST
Last Updated 21 ಮಾರ್ಚ್ 2023, 5:12 IST
   

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಆಮ್‌ ಆದ್ಮಿ ಪಕ್ಷದ ವಿವಾದದ ನಡುವೆ ದೆಹಲಿಯ ಬಜೆಟ್ ಅನ್ನು ನಿಲ್ಲಿಸಬೇಡಿ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಂಗಳವಾರ ನಿಗದಿಯಾಗಿದ್ದ ದೆಹಲಿ ಸರ್ಕಾರದ 2023-24ನೇ ಸಾಲಿನ ಬಜೆಟ್‌ನ ಮಂಡನೆಯನ್ನು ಕೇಂದ್ರ ಸರ್ಕಾರವು ವಿವಿಧ ಕಾರಣಗಳನ್ನು ನೀಡಿ ತಡೆ ಹಿಡಿದಿದೆ.

‘ಕಳೆದ 75 ವರ್ಷಗಳಲ್ಲಿ ರಾಜ್ಯವೊಂದರ ಬಜೆಟ್ ಸ್ಥಗಿತಗೊಂಡಿರುವುದು ಇದೇ ಮೊದಲು. ದಯವಿಟ್ಟು ದೆಹಲಿಯ ಬಜೆಟ್ ಅನ್ನು ಸ್ಥಗಿತಗೊಳಿಸಬೇಡಿ. ದೆಹಲಿಗರ ಮೇಲೆ ಯಾಕೆ ಕೋಪ? ದೆಹಲಿಯ ಜನತೆ ಬಜೆಟ್‌ ಮಂಡನೆಗೆ ಮನವಿ ಮಾಡುತ್ತಿದೆ’ಎಂದು ಪತ್ರದಲ್ಲಿ ಕೇಜ್ರಿವಾಲ್‌ ತಿಳಿಸಿದ್ದಾರೆ.

ADVERTISEMENT

ದೆಹಲಿಯಲ್ಲಿ ತಲಾ ಆದಾಯ ಹೆಚ್ಚಾಗಿದೆ. ಪ್ರತಿನಿತ್ಯದ ಎಲ್ಲ ಅಡೆತಡೆಗಳನ್ನು ಮೀರಿ ದೆಹಲಿಯ ಆಡಳಿತ ಉತ್ತಮವಾಗಿದೆ. ಯಾವುದೇ ಅಡತಡೆಗಳಿಲ್ಲದೆ ಎಲ್ಲ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ ಸರ್ಕಾರ) ಒಟ್ಟಾಗಿ ಕೆಲಸ ಮಾಡಿದ್ದರೆ ದೆಹಲಿಯ ಅಭಿವೃದ್ಧಿಯನ್ನು ಊಹಿಸಿ ಎಂದು ಕೇಜ್ರಿವಾಲ್‌ ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವಾಲಯ ಬಜೆಟ್ ಅನ್ನು ನಿಲ್ಲಿಸಿದೆ ಮತ್ತು ಮಂಗಳವಾರ ದೆಹಲಿ ವಿಧಾನಸಭೆಯಲ್ಲಿ ಅದನ್ನು ಮಂಡಿಸಲಾಗುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.