ADVERTISEMENT

ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಹೊಸ ಶಕ್ತಿ: ಪ್ರಧಾನಿ ನರೇಂದ್ರ ಮೋದಿ

ಉತ್ತರ ಪ್ರದೇಶದ ಕುಶಿನಗರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

ಪಿಟಿಐ
Published 20 ಅಕ್ಟೋಬರ್ 2021, 7:23 IST
Last Updated 20 ಅಕ್ಟೋಬರ್ 2021, 7:23 IST
ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ಉದ್ಘಾಟನೆಗೊಂಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೌದ್ಧ ಮಾಂಕ್‌ಗಳ ಗುಂಪೊಂದು ಶ್ರೀಲಂಕಾ ಏರ್‌ಲೈನ್ಸ್‌ ಮೂಲಕ ಬಂದಿಳಿಯಿತು.
ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ಉದ್ಘಾಟನೆಗೊಂಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೌದ್ಧ ಮಾಂಕ್‌ಗಳ ಗುಂಪೊಂದು ಶ್ರೀಲಂಕಾ ಏರ್‌ಲೈನ್ಸ್‌ ಮೂಲಕ ಬಂದಿಳಿಯಿತು.   

ಕುಶಿನಗರ(ಉತ್ತರ ಪ್ರದೇಶ): ನೂತನ ವಿಮಾನ ನಿಲ್ದಾಣಗಳ ನಿರ್ಮಾಣ, ಹೊಸ ವಾಯು ಮಾರ್ಗಗಳ ಅನುಮೋದನೆ ಸೇರಿದಂತೆ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಹೊಸ ಶಕ್ತಿಯನ್ನು ತುಂಬಲು ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಕುಶಿನಗರದಲ್ಲಿ ಬುಧವಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಈ ನೂತನ ವಿಮಾನ ನಿಲ್ದಾಣ, ರಾಷ್ಟ್ರೀಯ ಅಂತರಾಷ್ಟ್ರೀಯಮಟ್ಟದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಜೊತೆಗೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ, ಉದ್ಯೋಗಾವಕಾಶಗಳ ಸೃಷ್ಟಿಗೂ ನೆರವಾಗುತ್ತದೆ‘ ಎಂದು ಹೇಳಿದರು.

ಭಗವಾನ್ ಬುದ್ಧನ ತಾಣಗಳ ಅಭಿವೃದ್ಧಿ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸುತ್ತಿದೆ ಎಂದು ಹೇಳಿದರು.

ADVERTISEMENT

ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿದ ಮೋದಿ, ‘ಏರ್‌ಇಂಡಿಯಾವನ್ನು ಖಾಸಗೀಕರಣಗೊಳಿಸುವ ಮೂಲಕ ಬಹುದೊಡ್ಡ ಕ್ರಮವನ್ನು ಕೈಗೊಂಡಿದೆ. ಇದರಿಂದಾಗಿವಿಮಾನಯಾನ ಕ್ಷೇತ್ರವು ಮತ್ತಷ್ಟು ವೃತ್ತಿಪರವಾಗಿ ನಡೆಯಬೇಕು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಜೊತೆಗೆ, ಸುರಕ್ಷತೆಗೂ ಆದ್ಯತೆ ನೀಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ‘ ಎಂದರು.

ಇತ್ತೀಚೆಗೆ ಉದ್ಘಾಟಿಸಿದ ನೂತನ ಯೋಜನೆ ‘ಗತಿ ಶಕ್ತಿ‘– ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‘ ಕುರಿತು ಮಾತನಾಡಿದ ಮೋದಿ, ‘ಈ ಯೋಜನೆ ಕೇವಲ ಆಡಳಿತ ಸುಧಾರಿಸುವುದಷ್ಟೇ ಅಲ್ಲದೇ, ರಸ್ತೆ, ರೈಲು ಅಥವಾ ವಿಮಾನ ಯಾವುದೇ ಕ್ಷೇತ್ರವಿರಲಿ ಅವು ಪರಸ್ಪರ ಬೆಂಬಲಿಸುವ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೂ ನೆರವಾಗುತ್ತದೆ‘ ಎಂದು ಹೇಳಿದರು.

ಉತ್ತರ ಪ್ರದೇಶ ರಾಜ್ಯದಲ್ಲಿರುವ ಕುಶಿನಗರ, ಭಗವಾನ್ ಗೌತಮ ಬುದ್ಧ ತೀರಿಕೊಂಡ ತಾಣ. ಇದನ್ನು ಬುದ್ಧ ಮಹಾಪರಿನಿರ್ವಾಣಗೊಂಡ ಸ್ಥಳ ಎಂದು ಕರೆಯುತ್ತಾರೆ. ಜಗತ್ತಿನಲ್ಲಿರುವ ಬೌದ್ಧ ತಾಣಗಳಲ್ಲಿ ಇದು ಬಹಳ ಪ್ರಮುಖವಾದ ತಾಣ. ಜಗತ್ತಿನ ಬೇರೆ ಬೇರೆ ಭಾಗದಲ್ಲಿರುವ ಬೌದ್ಧ ಕ್ಷೇತ್ರಗಳನ್ನು ತಲಪಲು ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿರುವ ಬೌದ್ಧರ ಅನುಯಾಯಿಗಳಿಗೆ ಬುದ್ಧನ ಪರಿನಿರ್ವಾಣ ಸ್ಥಳಕ್ಕೆ ಸುಲಭವಾಗಿ ತಲುಪಲು ಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಟಣೆ ತಿಳಿಸಿದೆ.

3600 ಚದರ ಮೀಟರ್ ವಿಸ್ತೀರ್ಣದಲ್ಲಿರುವ ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ₹260 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಸಹಯೋಗದಲ್ಲಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.