ADVERTISEMENT

ಶಾಂಘೈ ಶೃಂಗಸಭೆ: ತೀವ್ರವಾದದ ವಿರುದ್ಧ ಹೋರಾಟಕ್ಕೆ ‘ಮಾದರಿ‘ ರೂಪಿಸಲು ಮೋದಿ ಕರೆ

ಪಿಟಿಐ
Published 17 ಸೆಪ್ಟೆಂಬರ್ 2021, 9:09 IST
Last Updated 17 ಸೆಪ್ಟೆಂಬರ್ 2021, 9:09 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಉಗ್ರವಾದ ಮತ್ತು ತೀವ್ರವಾದಗಳ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲ ಆಗುವಂತೆ ಮಾದರಿಯೊಂದನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಗೆ (ಎಸ್‌ಒಸಿ) ಕರೆ ನೀಡಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಎಸ್‌ಒಸಿ ವಾರ್ಷಿಕ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘ಉಗ್ರವಾದದಿಂದ ನಮ್ಮ ಪ್ರದೇಶಗಳಲ್ಲಿ ಹಲವು ಸವಾಲುಗಳು ಎದುರಾಗಿವೆ. ಈಗ ಅಫ್ಗಾನಿಸ್ತಾನದ ಬೆಳವಣಿಗೆಗಳು ಈ ಸವಾಲುಗಳನ್ನು ಪ್ರತಿಬಿಂಬಿಸುತ್ತಿವೆ‘ ಎಂದು ಅವರು ಹೇಳಿದರು.

ಅಫ್ಗಾನಿಸ್ತಾನದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳಿಗೆ ಶಾಂತಿ, ಭದ್ರತೆ ಮತ್ತು ವಿಶ್ವಾಸದ ಕೊರತೆಯೇ ಕಾರಣ ಎಂಬುದು ನನ್ನ ನಂಬಿಕೆ. ಈ ಸಮಸ್ಯೆಗಳಿಗೆ ಮೂಲ ಕಾರಣವೇ ಉಗ್ರವಾದ ಮತ್ತು ತೀವ್ರವಾದಗಳಾಗಿವೆ. ಅಫ್ಗಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಈ ಮಾತನ್ನು ಹೆಚ್ಚು ಸ್ಪಷ್ಟಪಡಿಸಿವೆ‘ ಎಂದರು.

ADVERTISEMENT

ಇಂಥ ಸವಾಲುಗಳನ್ನು ಎದುರಿಸಲು ಶಾಂಘೈ ಸಹಕಾರ ಸಂಘಟನೆ ಒಂದು ಮಾದರಿಯನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಪ್ರಾದೇಶಿಕ ಭದ್ರತೆ ಮತ್ತು ವಿಶ್ವಾಸದ ದೃಷ್ಟಿಯಿಂದಲ್ಲದೇ, ಈ ಪ್ರದೇಶದ ಯುವಜನರಿಗೆ ಉಜ್ವಲ ಭವಿಷ್ಯ ರೂಪಿಸುವ ದೃಷ್ಟಿಯಿಂದಲೂ ಉಗ್ರವಾದದ ವಿರುದ್ಧದ ಹೋರಾಟ ನಡೆಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ, ‘ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ವೃದ್ಧಿಸಲು ಭಾರತ ಬದ್ಧವಾಗಿದೆ‘ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.