ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
‘ರಾಷ್ಟ್ರೀಯ ಶಿಕ್ಷಣ ನೀತಿ–2020’ರ ಅಡಿ ಆಯೋಜಿಸಲಾಗಿರುವ ‘21ನೇ ಶತಮಾನದಲ್ಲಿ ಶಾಲಾ ಶಿಕ್ಷಣ’ ಕುರಿತ ಎರಡು ದಿನಗಳ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
‘ಶಿಕ್ಷಣವು ಸುತ್ತಲಿನ ವಿಚಾರಗಳೊಂದಿಗೆ ಸಕಾರಾತ್ಮಕವಾಗಿ ಬೆಸೆದುಕೊಂಡಿದ್ದಾಗ ವಿದ್ಯಾರ್ಥಿಯ ಜೀವನದ ಮೇಲೆ ಮತ್ತು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕಲಿಕೆಗೆ ಸುಲಭ ಮತ್ತು ಹೊಸ ತಂತ್ರಗಳನ್ನು ನಾವು ಉತ್ತೇಜಿಸಬೇಕು. ತೊಡಗಿಸಿಕೊಳ್ಳುವಿಕೆ (ಎಂಗೇಜ್), ಶೋಧನೆ (ಎಕ್ಸ್ಪ್ಲೋರ್), ಅನುಭವ (ಎಕ್ಸ್ಪೀರಿಯನ್ಸ್), ಅಭಿವ್ಯಕ್ತಿ (ಎಕ್ಸ್ಪ್ರೆಸ್) ಹಾಗೂ ಉತ್ತಮ ಕಾರ್ಯನಿರ್ವಹಣೆ (ಎಕ್ಸೆಲ್) ಸುಲಭ ಮತ್ತು ಹೊಸ ತಂತ್ರಗಳ ಮೂಲಗಳಾಗಿವೆ’ ಎಂದು ಮೋದಿ ಹೇಳಿದ್ದಾರೆ.
‘ದೇಶದ ಪ್ರತಿ ಪ್ರದೇಶವೂ ಅವುಗಳದ್ದೇ ಆದ ಕೆಲವು ವಿಶೇಷತೆಗಳನ್ನು ಹೊಂದಿವೆ. ಅವುಗಳಲ್ಲಿ ಉತ್ತಮ ಕೌಶಲದ ಅಗತ್ಯವಿರುವ ಸಾಂಪ್ರದಾಯಿಕ ಕಲೆಗಳಿರಬಹುದು, ಕೈಮಗ್ಗದಂತಹ ಯಾವುದೇ ಉತ್ಪನ್ನಗಳನ್ನು ತಯಾರಿಸುವ ಕೌಶಲಇರಬಹುದು. ಆಯಾ ಪ್ರದೇಶಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. ಸ್ಥಳೀಯ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಬೇಕು. ಹೀಗೆ ಮಾಡುವುದರಿಂದ ಅವರ ಕುತೂಹಲ ಹೆಚ್ಚಾಗುತ್ತದೆ ಮತ್ತು ಅವರಲ್ಲಿ ಕಲಿಯುವ ಆಸಕ್ತಿ ಮೊಳೆಯುತ್ತದೆ.ಇದರಿಂದ ಭವಿಷ್ಯದಲ್ಲಿ ಅವರು ಆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲೂಬಹುದು’ ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.