ನವದೆಹಲಿಯ ನೆಹರೂ ಪ್ರದೇಶದಲ್ಲಿರುವ ಎಲೆಕ್ಟ್ರಾನಿಕ್ ಮಳಿಗೆಗಳಿಗೆ ಶನಿವಾರ ಭೇಟಿ ನೀಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಲೆಕ್ಟ್ರಾನಿಕ್ ಟೆಕ್ನಿಷಿಯನ್ಗಳ ಜೊತೆ ಸಂವಾದ ನಡೆಸಿದರು–
ಪಿಟಿಐ ಚಿತ್ರ
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಘೋಷಣೆಗಳನ್ನು ಸೃಷ್ಟಿಸುವ ಕಲೆಯಲ್ಲಿ ಪರಿಣತಿ ಹೊಂದಿದ್ದಾರೆಯೇ ಹೊರತು, ಸಮಸ್ಯೆಗಳಿಗೆ ಪರಿಹಾರ ನೀಡುವುದರಲ್ಲಲ್ಲ. ‘ಭಾರತದಲ್ಲೇ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಉಪಕ್ರಮದ ಹೊರತಾಗಿಯೂ ದೇಶದ ಉತ್ಪಾದನಾ ಕ್ಷೇತ್ರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗಾಗಿ ‘ಮೇಕ್ ಇನ್ ಇಂಡಿಯಾ’ದ ಭರವಸೆ ನೀಡಲಾಯಿತು. ಆದರೂ ಉತ್ಪಾದನಾ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಾಣಲು ಕಾರಣವೇನು? ಯುವ ಸಮುದಾಯವು ಗರಿಷ್ಠ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಅನುಭವಿಸುತ್ತಿದೆ. ಚೀನಾದಿಂದ ಆಮದು ಮಾಡುತ್ತಿರುವ ಉತ್ಪನ್ನಗಳು ಯಾಕೆ ದ್ವಿಗುಣಗೊಂಡಿವೆ’ ಎಂದು ಪ್ರಶ್ನಿಸಿದ್ದಾರೆ.
‘2014ರಿಂದಲೂ ಉತ್ಪಾದನಾ ಕ್ಷೇತ್ರವು ದೇಶದ ಆರ್ಥಿಕತೆಯ ಶೇ 14ರಷ್ಟು ಕುಸಿತ ದಾಖಲಿಸಿದೆ. ಅವರಿಗೆ (ಮೋದಿ) ಹೊಸ ಆಲೋಚನೆಗಳಿಲ್ಲ. ಈಗ ಶರಣಾಗತಿಯಾಗಿದ್ದಾರೆ. ಅಬ್ಬರದ ಪ್ರಚಾರ ಪಡೆದುಕೊಂಡು ಜಾರಿಗೆ ತಂದಿದ್ದ ಪಿಎಲ್ಐ ಯೋಜನೆಯನ್ನು ಸದ್ದಿಲ್ಲದೇ ಹಿಂದಕ್ಕೆ ಪಡೆಯಲಾಗಿದೆ’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ನವದೆಹಲಿಯ ನೆಹರೂ ಮಾರುಕಟ್ಟೆಯಲ್ಲಿ ಶಿವಂ, ಸೈಫ್ ಹೆಸರಿನ ಮೊಬೈಲ್ ರಿಪೇರಿ ಟೆಕ್ನಿಷಿಯನ್ನನ್ನು ಭೇಟಿಯಾದೆ. ಇಬ್ಬರೂ ಬುದ್ಧಿವಂತರಾಗಿದ್ದು, ಉತ್ತಮ ಕೌಶಲ ಹೊಂದಿದ್ದಾರಾದರೂ ಅವಕಾಶಗಳು ಲಭ್ಯವಿಲ್ಲ’ ಎಂದು ಸಂವಾದ ನಡೆಸಿದ ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ.
‘ಭಾರತದಲ್ಲೇ ತಯಾರಿಸಿ’ ಹಾಗೂ ‘ಭಾರತದಲ್ಲೇ ಜೋಡಿಸಿ’ ಎಂಬ ಎರಡರ ನಡುವಿನ ವ್ಯತ್ಯಾಸ ವಿವರಿಸಿದ ರಾಹುಲ್ ಗಾಂಧಿ, ‘ನಾವು ಅಲ್ಲಿಂದ ತರಿಸಿಕೊಂಡ ವಸ್ತುಗಳನ್ನು ಇಲ್ಲಿಯೇ ಜೋಡಿಸುತ್ತೇವೆ. ನಾವು ಯಾವುದನ್ನೂ ತಯಾರಿಸುವುದಿಲ್ಲ. ಇದರಿಂದ ಚೀನಾ ಲಾಭ ಮಾಡಿಕೊಳ್ಳುತ್ತಿದೆ’ ಎಂದರು.
Highlights - ನಾನು ಜಾತಿಗಣತಿ ವಿಚಾರ ಪ್ರಸ್ತಾಪಿಸಿದ ವೇಳೆ ಕೇಂದ್ರ ಸರ್ಕಾರ ಮೆಚ್ಚಿಕೊಂಡಿರಲಿಲ್ಲ ಗಣತಿ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯ ಭಾರತೀಯ ಸಮಾಜದಲ್ಲಿ ಅಧಿಕಾರ ಹೇಗೆ ಹಂಚಿಕೆಯಾಗಿದೆ ಎಂಬುದು ತಿಳಿಯಲು ಸಾಧ್ಯ: ರಾಹುಲ್ ಗಾಂಧಿ
Quote - ಸಮಾಜದಲ್ಲಿರುವ ಎಲ್ಲ ವರ್ಗದ ಜಾತಿಗಳಿಗೆ ಸಮಾನವಾದ ಅಧಿಕಾರ ಪಾಲು ಸಿಗಬೇಕಾದರೆ ದೇಶದಾದ್ಯಂತ ಜಾತಿಗಣತಿ ನಡೆಸುವುದು ಅಗತ್ಯ ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.