ADVERTISEMENT

'ನಾಗರಿಕ ದೇವೋ ಭವ': ಸೇವಾ ತೀರ್ಥ ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ಪಿಟಿಐ
Published 13 ಫೆಬ್ರುವರಿ 2026, 10:40 IST
Last Updated 13 ಫೆಬ್ರುವರಿ 2026, 10:40 IST
   

ನವದೆಹಲಿ: ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಒಳಗೊಂಡಿರುವ 'ಸೇವಾ ತೀರ್ಥ' ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಉದ್ಘಾಟಿಸಿದರು.

ಹೊಸ ಸಂಕೀರ್ಣದಲ್ಲಿ ಸೇವಾ ತೀರ್ಥದ ಫಲಕವನ್ನು ಮೋದಿ ಅನಾವರಣಗೊಳಿಸಿದರು. ಸಂಕೀರ್ಣದ ಗೋಡೆಯ ಮೇಲೆ ದೇವನಾಗರಿ ಲಿಪಿಯಲ್ಲಿ ಕೆತ್ತಲಾದ ಹೆಸರು, ಅದರ ಕೆಳಗೆ 'ನಾಗರಿಕ ದೇವೋ ಭವ' ( ನಾಗರಿಕ ದೇವರಿಗೆ ಸಮಾನ) ಎಂಬ ಧ್ಯೇಯವಾಕ್ಯವಿದೆ.

ರೈಸಿನಾ ಹಿಲ್‌ ಪ್ರದೇಶದ ಸೌತ್ ಬ್ಲಾಕ್‌ನಲ್ಲಿದ್ದ ಪ್ರಧಾನಿ ಕಾರ್ಯಾಲಯ ಇನ್ನು ಮುಂದೆ ಈ ಸೇವಾ ತೀರ್ಥಕ್ಕೆ ಸ್ಥಳಾಂತರಗೊಳ್ಳಲಿದೆ. ಜತೆಗೆ ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿದ್ದ ಸಚಿವಾಲಯಗಳ ಕಚೇರಿ, ಸಂಪುಟ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಕಚೇರಿ ಇಲ್ಲಿಗೆ ಸ್ಥಳಾಂತರಗೊಳ್ಳಲಿವೆ.

ADVERTISEMENT

ಉದ್ಘಾಟನಾ ಸಮಾರಂಭದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್, ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮತ್ತು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ವಸಾಹತುಶಾಹಿ ಕಾಲದ ಕುರುಹುಗಳನ್ನು ಅಳಿಸಿ ಹಾಕಲು ಮತ್ತು ಬದಲಾವಣೆ ತರಲು ಮೋದಿ ಸರ್ಕಾರ 2014ರಿಂದ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನ ಮಂತ್ರಿಗಳ ಕಚೇರಿಯನ್ನು ಇನ್ನು ಮುಂದೆ 'ಸೇವಾ ತೀರ್ಥ' ಎಂದು ಕರೆಯಲಾಗುತ್ತದೆ, ಕೇಂದ್ರ ಸಚಿವಾಲಯದ ಕಟ್ಟಡಗಳನ್ನು 'ಕರ್ತವ್ಯ ಭವನ' ಎಂದು, ರಾಜಪಥವನ್ನು 'ಕರ್ತವ್ಯ ಪಥ' ಎಂದೂ ಮರುನಾಮಕರಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ, ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸವಿರುವ ರೇಸ್ ಕೋರ್ಸ್ ರಸ್ತೆಯನ್ನು 'ಲೋಕ ಕಲ್ಯಾಣ ಮಾರ್ಗ' ಎಂದು ಮರುನಾಮಕರಣ ಮಾಡಲಾಗಿದೆ. ಹಾಗೆಯೇ ರಾಜಭವನ ಮತ್ತು ರಾಜ್ ನಿವಾಸಗಳನ್ನು ಕ್ರಮವಾಗಿ 'ಲೋಕಭವನ' ಮತ್ತು 'ಲೋಕ ನಿವಾಸ' ಎಂದೂ ಮರುನಾಮಕರಣ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.