ADVERTISEMENT

ಪಿಎಂ ವಿಶ್ವಕರ್ಮಕ್ಕೆ ಚಾಲನೆ: ₹13 ಸಾವಿರ ಕೋಟಿ ನೆರವು– ನೋಂದಣಿ ಹೇಗೆ?

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 17:21 IST
Last Updated 17 ಸೆಪ್ಟೆಂಬರ್ 2023, 17:21 IST
<div class="paragraphs"><p>ನವದೆಹಲಿಯಲ್ಲಿ ಭಾನುವಾರ ನಡೆದ ಇಂಡಿಯಾ ಇಂಟರ್‌ನ್ಯಾಷನಲ್‌ ಕನ್ವೆಂಷನ್ ಆ್ಯಂಡ್‌ ಎಕ್ಸ್‌ಪೋ ಸೆಂಟರ್‌ನ ಉದ್ಘಾಟನೆ ವೇಳೆ ಕುಶಲಕರ್ಮಿಯೊಬ್ಬರು ತಯಾರಿಸಿದ ವಸ್ತುವನ್ನು ಕುತೂಹಲದಿಂದ ವೀಕ್ಷಿಸಿದರು – </p></div>

ನವದೆಹಲಿಯಲ್ಲಿ ಭಾನುವಾರ ನಡೆದ ಇಂಡಿಯಾ ಇಂಟರ್‌ನ್ಯಾಷನಲ್‌ ಕನ್ವೆಂಷನ್ ಆ್ಯಂಡ್‌ ಎಕ್ಸ್‌ಪೋ ಸೆಂಟರ್‌ನ ಉದ್ಘಾಟನೆ ವೇಳೆ ಕುಶಲಕರ್ಮಿಯೊಬ್ಬರು ತಯಾರಿಸಿದ ವಸ್ತುವನ್ನು ಕುತೂಹಲದಿಂದ ವೀಕ್ಷಿಸಿದರು –

   

ಪಿಟಿಐ ಚಿತ್ರ

ನವದೆಹಲಿ: ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸಲು ಕೇಂದ್ರ ಸರ್ಕಾರವು ವಿಶ್ವಕರ್ಮ ಜಯಂತಿ ದಿನದಂದೇ ₹13 ಸಾವಿರ ಕೋಟಿ ಮೊತ್ತದ ‘ಪಿಎಂ ವಿಶ್ವಕರ್ಮ’ ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದೆ.

ADVERTISEMENT

ಪ್ರಧಾನಿ ನರೇಂದ್ರ  ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಈ ಯೋಜನೆಯನ್ನು ಘೋಷಿಸಿದ್ದರು. ಅವರ 73ನೇ ಜನ್ಮದಿನವಾದ ಸೋಮವಾರ ಇದಕ್ಕೆ ಚಾಲನೆ ಸಿಕ್ಕಿದೆ. 

ಕುಶಲಕರ್ಮಿಗಳಲ್ಲಿ ವ್ಯಾಪಕ ಅರಿವು ಮೂಡಿಸಲು ಕೇಂದ್ರ ಸಚಿವರು ಹಾಗೂ ಆಯಾ ರಾಜ್ಯಗಳ ಪ್ರಮುಖರ ನೇತೃತ್ವದಲ್ಲಿ ದೇಶದ 70 ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್‌ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಅವರು ತಯಾರಿಸುವ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಯೋಜನೆಯ ಮೂಲ ಗುರಿಯಾಗಿದೆ.

ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಈ ಯೋಜನೆಯ ಅನುದಾನವನ್ನು ಭರಿಸಲಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಒಟ್ಟು 30 ಲಕ್ಷ ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲಿದೆ.

ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ‘ಕಡಿಮೆ ಬಡ್ಡಿದರದಲ್ಲಿ ₹3 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಶೀಘ್ರವೇ, ₹1 ಲಕ್ಷ ಸಾಲ ನೀಡಲಾಗುವುದು. ಅದನ್ನು ಮರುಪಾವತಿ ಮಾಡಿದ ಬಳಿಕ ಉಳಿದ ₹2 ಲಕ್ಷ ಸಾಲವು ಫಲಾನುಭವಿಗೆ ದೊರೆಯಲಿದೆ’ ಎಂದರು.

ಟೂಲ್‌ ಕಿಟ್‌ಗೆ ನೆರವು

ಅತಿಸಣ್ಣ, ಸಣ್ಣ ಹಾಗೂ ಮಾಧ್ಯಮ ಉದ್ಯಮಗಳ ಸಚಿವಾಲಯವು ಈ ಯೋಜನೆಯ ನೋಡಲ್‌ ಏಜೆನ್ಸಿಯಾಗಿದೆ. ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಸಣ್ಣ ಪ್ರಮಾಣದ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕ‍ಂಪನಿಗಳು, ಸಣ್ಣ ಹಣಕಾಸು ಸಂಸ್ಥೆಗಳಿಂದ ಫಲಾನುಭವಿಗಳಿಗೆ ಸಾಲ ಸೌಲಭ್ಯ ಸಿಗಲಿದೆ.

ಫಲಾನುಭವಿಗಳಿಗೆ ಶೇ 5ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಸಂಬಂಧಪಟ್ಟ ಬ್ಯಾಂಕ್‌ಗಳು ಅಥವಾ ಇತರೆ ಹಣಕಾಸು ಸಂಸ್ಥೆಗಳಿಗೆ ಶೇ 8ರಷ್ಟು ಬಡ್ಡಿ ಸಹಾಯಧನ ನೀಡಲಿದೆ. 

ಫಲಾನುಭವಿಗೆ ಟೂಲ್‌ ಕಿಟ್‌ ಖರೀದಿಗಾಗಿ ಯೋಜನೆಯಡಿ ₹15 ಸಾವಿರ ಮೌಲ್ಯದ ಇ–ವೋಚರ್ಸ್‌ ಅಥವಾ ಇ–ರುಪಿ ನೀಡಲಾಗುವುದು. ಸರ್ಕಾರದ ಪರವಾಗಿ ಈ ಪ್ರೋತ್ಸಾಹಧನದ ವೋಚರ್ಸ್‌ಗಳನ್ನು ಬ್ಯಾಂಕ್‌ ಮೂಲಕ ನೀಡಲಾಗುತ್ತದೆ. 

ಕೇಂದ್ರ ಸರ್ಕಾರವು ಪಿಎಂ ವಿಶ್ವಕರ್ಮ ಯೋಜನೆ ಮೂಲಕ ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ಗುರುತಿಸಿ ಅವರಿಗೆ ಆರ್ಥಿಕ ನೆರವು ಕಲ್ಪಿಸಲು ಒತ್ತು ನೀಡಿದೆ ನರೇಂದ್ರ ಮೋದಿ ಪ್ರಧಾನಿ

ಪಿಎಂ ವಿಶ್ವಕರ್ಮ ಯೋಜನೆಯು ಮೋದಿ ಅವರ ಮತ್ತೊಂದು ಚುನಾವಣಾ ಗಿಮಿಕ್‌ ಅಷ್ಟೇ. ಅವರ ರಾಜಕೀಯ ನಿವೃತ್ತಿಗೆ ಇದು ಸಕಾಲ ಜೈರಾಮ್‌ ರಮೇಶ್‌ ಪ್ರಧಾನ ಕಾರ್ಯದರ್ಶಿ ಎಐಸಿಸಿ

ಎಷ್ಟು ಸಾಲ ಸಿಗಲಿದೆ?

* ಶೇ 5ರಷ್ಟು ಬಡ್ಡಿದರದಡಿ ಒಟ್ಟು ₹3 ಲಕ್ಷ ಬ್ಯಾಂಕ್‌ ಖಾತರಿ ರಹಿತ ಸಾಲ * ಮೊದಲ ಕಂತಿನಲ್ಲಿ ದೊರೆತ ₹1 ಲಕ್ಷ ಸಾಲಕ್ಕೆ 18 ತಿಂಗಳ ಮರುಪಾವತಿ ಗಡುವು  * ಎರಡನೇ ಕಂತಿನಲ್ಲಿ ದೊರೆತ ₹2 ಲಕ್ಷ ಸಾಲ ಮರುಪಾವತಿಗೆ 30 ತಿಂಗಳ ಗಡುವು * ಟೂಲ್‌ ಕಿಟ್‌ ಖರೀದಿಗೆ  15 ಸಾವಿರ ಮೊತ್ತದ ಇ–ವೋಚರ್ಸ್‌ 

ನೋಂದಣಿ ಹೇಗೆ?

ಫಲಾನುಭವಿಯು ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೊಮೆಟ್ರಿಕ್‌ ಆಧಾರಿತ ‘ಪಿಎಂ ವಿಶ್ವಕರ್ಮ’ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಯಾದವರಿಗೆ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಲಭಿಸಲಿದೆ. ನೋಂದಣಿ ದಿನದ ವೇಳೆಗೆ ಫಲಾನುಭವಿಯ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸ್ವಉದ್ಯೋಗ ಅಥವಾ ವ್ಯಾಪಾರ ಅಭಿವೃದ್ಧಿಗೆ ಸಾಲ ಸೌಲಭ್ಯ ಪಡೆದವರಿಗೆ ಈ ಯೋಜನೆಯಡಿ ಮತ್ತೆ ಸಾಲ ಸಿಗುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಖಾತರಿ ಯೋಜನೆ ಪಿಎಂ ಸ್ವನಿಧಿ (ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ) ಮುದ್ರಾ ಯೋಜನೆಯಡಿ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ನೀಡುವುದಿಲ್ಲ. ಈ ಕುರಿತು ಪೋರ್ಟಲ್‌ನಲ್ಲಿ ಮಾಹಿತಿ ನೀಡಲಾಗಿದೆ. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಷ್ಟೇ ಯೋಜನೆಯ ಸೌಲಭ್ಯ ಪಡೆಯಲು ಅರ್ಹರು. ಸರ್ಕಾರಿ ನೌಕರ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೌಲಭ್ಯ ಸಿಗುವುದಿಲ್ಲ.

ಒಬಿಸಿ ಮತ ಸೆಳೆಯಲು ಬಿಜೆಪಿ ಯತ್ನ?

‘ಪಿಎಂ ವಿಶ್ವಕರ್ಮ’ ಯೋಜನೆಯ ಜಾರಿ ಹಿಂದೆ ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಂತ್ರಗಾರಿಕೆ ಅಡಗಿದೆ ಎಂದು ಹೇಳಲಾಗಿದೆ. ಮಧ್ಯಪ್ರದೇಶ ರಾಜಸ್ಥಾನ ಛತ್ತೀಸಗಢ ತೆಲಂಗಾಣ ಹಾಗೂ ಮೀಜೊರಾಂ ರಾಜ್ಯದ ವಿಧಾನಸಭೆಗೆ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಹಾಗಾಗಿ ಒಬಿಸಿ ಮತ ಬುಟ್ಟಿಯ ಮೇಲೆ ಕಣ್ಣಿಟ್ಟಿರುವ ಕೇಂದ್ರವು ಈ ಯೋಜನೆ ಘೋಷಿಸಿದೆ ಎನ್ನಲಾಗಿದೆ.

18 ಕುಶಲಕರ್ಮಿಗಳು

* ಬಡಗಿ/ಮರಗೆಲಸದವರು * ದೋಣಿ ತಯಾರಕರು * //ಶಸ್ತ್ರ ತಯಾರಕರು// * ಕಮ್ಮಾರರು * ಸುತ್ತಿಗೆ ಹಾಗೂ ಇತರ ವಸ್ತುಗಳ ತಯಾರಕರು * ಬೀಗ ಹಾಗೂ ಕೀಲಿ ತಯಾರಕರು * ಅಕ್ಕಸಾಲಿಗರು * ಕಮ್ಮಾರರು * ಶಿಲ್ಪಿಗಳು ಮತ್ತು ಕಲ್ಲು ಒಡೆಯುವವರು * ಪಾದರಕ್ಷೆ ತಯಾರಕರು (ಸಾಂಪ್ರದಾಯಿಕ) * ಕಲ್ಲು ಕುಟಿಗರು (ರಾಜಮೇಸ್ತ್ರಿ) * ಬುಟ್ಟಿ ಚಾಪೆ ಪೊರಕೆ ತೆಂಗಿನನಾರಿನ ಹಗ್ಗ ತಯಾರಕರು * ಗೊಂಬೆ ಮತ್ತು ಆಟಿಕೆ ತಯಾರಕರು (ಸಾಂಪ್ರದಾಯಿಕ) * ಕ್ಷೌರಿಕರು * ಹೂಮಾಲೆ ತಯಾರಕರು * ಅಗಸರು (ಬಟ್ಟೆ ತೊಳೆಯುವವರು) * ದರ್ಜಿ   * ಮೀನಿನ ಬಲೆ ತಯಾರಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.