ನವದೆಹಲಿ: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಜಿ20 ದೇಶಗಳ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೈಗಾರಿಕಾ ಕ್ರಾಂತಿಯ ಈ ಯುಗದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
ತಂತ್ರಜ್ಞಾನ ನೇತೃತ್ವದ ಪರಿವರ್ತನೆಯ ಈ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಉದ್ಯೋಗಗಳನ್ನು ಸೃಷ್ಟಿಸಿದ ಅನುಭವ ಹೊಂದಿರುವ ದೇಶದಲ್ಲಿ ಈ ಸಭೆ ನಡೆಯುತ್ತಿರುವುದು ಅದೃಷ್ಟ ಎಂದು ಹೇಳಿದ್ದಾರೆ.
ಸುಧಾರಿತ ತಂತ್ರಜ್ಞಾನ ಬಳಕೆಯಲ್ಲಿ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಬೇಕು. ಭಾರತದಲ್ಲಿ ಸ್ಕಿಲ್ ಇಂಡಿಯಾ ಮಿಷನ್ ಸೂತ್ರದಡಿ ಭವಿಷ್ಯದಲ್ಲಿ ವೃತ್ತಿಪರ ನೌಕರರ ಸಮೂಹವನ್ನು ಸೃಷ್ಟಿಸಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ದೇಶದಲ್ಲಿ ಆರೋಗ್ಯ ಹಾಗೂ ಮುಂಚೂಣಿಯ ಕಾರ್ಯಕರ್ತರು ಮಾಡಿದ ಅದ್ಭುತ ಕೆಲಸವು ಅವರ ಕೌಶಲ್ಯ ಮತ್ತು ಅರ್ಪಣೆಯನ್ನು ತೋರಿಸುತ್ತದೆ. ಇದು ನಮ್ಮ ಸೇವೆ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ವಾಸ್ತವವಾಗಿ, ವಿಶ್ವಕ್ಕೆ ನುರಿತ ಉದ್ಯೋಗಿಗಳ ಪೂರೈಕೆದಾರರಲ್ಲಿ ಒಂದಾಗುವ ಸಾಮರ್ಥ್ಯವನ್ನು ಭಾರತವು ಹೊಂದಿದೆ ಎಂದು ಉಲ್ಲೇಖಿಸಿದರು.
ಪ್ರತಿಯೊಂದು ದೇಶದ ವಿಶಿಷ್ಟ ಆರ್ಥಿಕ ಸಾಮರ್ಥ್ಯ, ಬಲ ಮತ್ತು ಸವಾಲುಗಳನ್ನು ನಾವು ಪರಿಗಣಿಸಬೇಕು. ಸಾಮಾಜಿಕ ಭದ್ರತೆಯ ಸುಸ್ಥಿರ ಹಣಕಾಸಿಗಾಗಿ ಒಂದೇ ನೀತಿ ಆಳವಡಿಸಿಕೊಳ್ಳುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.