ನವದೆಹಲಿ: ಬಿಎಸ್ಪಿ ನಾಯಕಿ ಮಾಯಾವತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವಕ್ಷೇತ್ರದಲ್ಲಿ ಸೋಲು ಕಂಡ ಇತಿಹಾಸವನ್ನು ನೆನಪಿಸಿದ್ದಾರೆ.
ತುರ್ತುಪರಿಸ್ಥಿತಿ ಹೇರಿಕೆಯ ನಿರ್ಧಾರದಿಂದಾಗಿ ಇಂದಿರಾಗಾಂಧಿ ಅವರು 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವಾದ ರಾಯ್ಬರೇಲಿಯಲ್ಲಿ ಸೋಲುಕಂಡರು. ಈ ಇತಿಹಾಸ ವಾರಾಣಸಿಯಲ್ಲಿ ಮರುಕಳಿಸಿದರೆ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿರುವ ಮಾಯಾವತಿ, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಬ್ಬರೂ ಪ್ರತಿನಿಧಿಸುವ ಪುರ್ವಾಂಚಲ ಪ್ರದೇಶದಲ್ಲಿ ಅಭಿವೃದ್ಧಿ ಮರೆಯಾಗಿದೆ.ನೀಡಿದ್ದ ಭರವಸೆಗಳು ಹುಸಿಯಾಗಿವೆ. ಗೋರ್ಖ್ಪುರದಲ್ಲಿ ಯೋಗಿ ಅವರನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ವಾರಾಣಸಿಯಲ್ಲಿ ಮೋದಿ ಅವರ ಸೋಲು ಅವರ ಗೆಲುವಿಗಿಂತಲೂ ಐತಿಹಾಸಿಕವಾಗಿರುತ್ತದೆ. 1977ರಲ್ಲಿ ರಾಯ್ಬರೇಲಿಯಲ್ಲಿ ನಿರ್ಮಾಣವಾದ ಸ್ಥಿತಿಯೇ ಇಲ್ಲಿ ಮರುಕಳಿಸಬಹುದು’ ಎಂದು ಬರೆದುಕೊಂಡಿದ್ದಾರೆ.
‘ಮೋದಿ ಅವರ ಗುಜರಾತ್ ಮಾದರಿ ಉತ್ತರ ಪ್ರದೇಶದ ಪುರ್ವಾಂಚಲ ಪ್ರದೇಶದ ಬಡತನ, ನಿರುದ್ಯೋಗವನ್ನು ತೊಡೆದುಹಾಕಲಿಲ್ಲ. ಅದರ ಬದಲು ಮೋದಿ-ಯೋಗಿ ಡಬಲ್ ಇಂಜಿನ್ ಸರ್ಕಾರ ದೇಶಕ್ಕೆ ಕೋಮುಗಲಭೆ, ದ್ವೇಷ ಮತ್ತು ಹಿಂಸಾಚಾರವನ್ನು ನೀಡಿದೆ’ ಎಂದೂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.