ಚುಚುರಾ (ಪ.ಬಂಗಾಳ): ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ಜನ ಸಾಮಾನ್ಯರ ಜೀವನದ ಎಲ್ಲ ಕ್ಷೇತ್ರಗಳಲ್ಲೂ 'ಸಿಂಡಿಕೇಟ್ ರಾಜ್' ಹೇರಲಾಗಿದ್ದು, ಜನ ಸಾಮಾನ್ಯರು ಹಣ ನೀಡದೇ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಾಗೂ ಆಯುಷ್ಮಾನ್ ಭಾರತ್ನಂತಹ ಯೋಜನೆಗಳನ್ನು ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನಗೊಳಿಸಲು ಅನುಮತಿ ನೀಡದ ಕಾರಣ ಅದರ ಪ್ರಯೋಜನವನ್ನು ಪಡೆಯುವುದರಿಂದ ರೈತರು ವಂಚಿತವಾಗಿದ್ದಾರೆ ಎಂದು ಮಮತಾ ಸರ್ಕಾರವನ್ನು ದೂಷಿಸಿದರು.
ರಾಷ್ಟ್ರಗೀತೆ 'ವಂದೇ ಮಾತರಂ' ಬರೆದಿರುವ ಬಂಕಿಮ ಚಂದ್ರ ಚಟರ್ಜಿಅವರ ಮನೆ ಶಿಥಿಲವಾವಸ್ಥೆಯಲ್ಲಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿಯ ಮನೆ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ಇದು ಬಂಗಾಳಿ ಹೆಮ್ಮೆಗಾದ ಅವಮಾನ ಎಂದು ಆರೋಪಿಸಿದರು.
ಸೆಣಬು ಸೇರಿದಂತೆ ಕೈಗಾರಿಕೋದ್ಯಮದಲ್ಲೂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಆರೋಪಿಸಿದರು.
ಬಂಗಾಳ ಜನತೆಯು ನಿಜವಾದ ಬದಲಾವಣೆಯನ್ನು ಬಯಸುತ್ತಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರವು ಅಭಿವೃದ್ಧಿಯನ್ನು ಒದಗಿಸಲಿದೆ ಎಂದು ಭರವಸೆ ನೀಡಿದರು.
ಬಂಗಾಳ ಸರ್ಕಾರವು ಗೂಂಡಾಗಳನ್ನು ಪೋಷಿಸುವವ ವರೆಗೂ ಅಭಿವೃದ್ಧಿ ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ವರೆಗೂ ಬಂಗಾಳದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.
ಒಮ್ಮೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆ ಹಾಗೂ ಸಂಸ್ಕೃತಿಯನ್ನು ಕಾಪಾಡಲು ಸಾಧ್ಯವಾಗಲಿದೆ. ಯಾರೂ ಅವರನ್ನು ಬೆದರಿಸಲು ಅಥವಾ ಇಲ್ಲದಾಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಂಗಾಳದಲ್ಲಿ ಹೂಡಿಕೆದಾರರಿಗೆ ಯಾವುದೇ ಕೊರತೆಯಿಲ್ಲ. ಆದರೆ ಸಿಂಡಿಕೇಟ್ ರಾಜ್ ಹಾಗೂ ಹಣ ಲೂಟಿ ಮಾಡುವ ಬೆದರಿಕೆಯಿಂದಾಗಿ ರಾಜ್ಯದಲ್ಲಿ ಹೂಡಿಕೆ ಮಾಡುವುದರಿಂದ ಹಿಂಜರಿಯುತ್ತಿದ್ದಾರೆ ಎಂದುಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.