ADVERTISEMENT

ಸಂಪ್ರದಾಯ ಮುರಿದು, ಸೂರ್ಯಾಸ್ತದ ನಂತರ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

ಪಿಟಿಐ
Published 19 ಏಪ್ರಿಲ್ 2022, 15:44 IST
Last Updated 19 ಏಪ್ರಿಲ್ 2022, 15:44 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಗುರು ತೇಗ್‌ ಬಹಾದೂರ್‌ ಅವರ 400ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ಕೆಂಪು ಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಮೊಘಲರ ಕಾಲದ ಸ್ಮಾರಕದಲ್ಲಿ ಸೂರ್ಯಾಸ್ತ ನಂತರ ಭಾಷಣ ಮಾಡಿದ ಮೊದಲ ಪ್ರಧಾನಿ ಎಂದೆನಿಸಿಕೊಳ್ಳಲಿದ್ದಾರೆ.

ರಾಷ್ಟ್ರವನ್ನು ಉದ್ದೇಶಿಸಿ ಪಿಎಂ ಮೋದಿ ಕೆಂಪು ಕೋಟೆಯ ಮೇಲೆ ಭಾಷಣ ಮಾಡುವ ಬದಲು ಹುಲ್ಲುಹಾಸಿನ ಮೇಲೆ ಮಾತನಾಡುತ್ತಿರುವುದು ವಿಶೇಷವಾಗಿದೆ.

ಸಂಸ್ಕೃತಿ ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ, 1675ರಲ್ಲಿ 9ನೇ ಸಿಖ್‌ ಗುರು ತೇಗ್‌ ಬಹಾದೂರ್‌ ಅವರಿಗೆ ಮೊಘಲ್‌ ದೊರೆ ಔರಂಗಜೇಬ್‌ ಮರಣದಂಡನೆ ಘೋಷಿಸಿದ ಸ್ಥಳ ಇದಾಗಿದೆ.

ಸಾಮಾನ್ಯವಾಗಿ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿಗಳು ಕೆಂಪು ಕೋಟೆಯ ಮೇಲೆ ಭಾಷಣ ಮಾಡುತ್ತಾರೆ.

ADVERTISEMENT

ಪ್ರಧಾನಿ ಮೋದಿ ಗುರುವಾರ ರಾತ್ರಿ 9.30ಕ್ಕೆ ಭಾಷಣ ಮಾಡಲಿದ್ದು, ಸಮುದಾಯಗಳ ಮಧ್ಯೆ ಭ್ರಾತೃತ್ವ ಮತ್ತು ಶಾಂತಿ ಕಾಪಾಡುವ ಬಗ್ಗೆ ಮಾತನಾಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ದಿನವನ್ನು ಹೊರತು ಪಡಿಸಿ 2ನೇ ಬಾರಿಗೆ ಮೋದಿ ಕೆಂಪು ಕೋಟೆಯಲ್ಲಿ ಭಾಷಣ ಮಾಡುತ್ತಿದ್ದಾರೆ.

ಗುರುವಾರದ ಕಾರ್ಯಕ್ರಮದಲ್ಲಿ 400 ಸಿಖ್‌ ಸಂಗೀತ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಇದೇ ವೇಳೆ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 11 ಮುಖ್ಯಮಂತ್ರಿಗಳು ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಸಿಖ್‌ ಪ್ರಮುಖರು ಭಾಗಿಯಾಗಲಿದ್ದಾರೆ. 400 ಸಿಖ್‌ ಜಥೆದಾರ್‌ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.