ಹೈದರಾಬಾದ್: ಕೋವಿಡ್-19 ವಿರುದ್ಧ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆಯ ಪ್ರಗತಿ ಪರಿಶೀಲನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿನ ಭಾರತ್ ಬಯೋಟೆಕ್ ಘಟಕಕ್ಕೆ ಭೇಟಿ ನೀಡಿದರು.
ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆಯ ಬಗ್ಗೆ ವಿಜ್ಞಾನಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದರು.
ಬಳಿಕ ಟ್ವೀಟ್ ಮಾಡಿರುವ ಮೋದಿ, ‘ಭಾರತ್ ಬಯೋಟೆಕ್ನ ಹೈದರಾಬಾದ್ ಘಟಕದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಲಸಿಕೆ ಕುರಿತು ಮಾಹಿತಿ ನೀಡಿದ್ದಾರೆ. ಈವರೆಗಿನ ಪ್ರಯೋಗಕ್ಕೆ ಸಂಬಂಧಿಸಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಲಸಿಕೆಯ ತ್ವರಿತ ಪ್ರಗತಿಗೆ ಅನುಕೂಲವಾಗುವಂತೆ ಅವರ ತಂಡವು ಐಸಿಎಂಆರ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ.
ಇದಕ್ಕೂ ಮುನ್ನ ಮೋದಿಯವರು ಗುಜರಾತ್ನ ಅಹಮದಾಬಾದ್ನ ಜೈಡಸ್ ಕ್ಯಾಡಿಲಾ ಸಂಸ್ಥೆಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದರು.
ಮೋದಿ ಅವರು ಹೈದರಾಬಾದ್ನಿಂದ ಪುಣೆಗೆ ತೆರಳುತ್ತಿದ್ದು, ಅಲ್ಲಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ (ಎಸ್ಐಐ) ಭೇಟಿ ನೀಡಲಿದ್ದಾರೆ. ಕೊರೊನಾ ಸೋಂಕು ವಿರುದ್ಧದ ಲಸಿಕೆಯ ಬಿಡುಗಡೆಗೆ ಮುನ್ನ ಅದರ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆಯ ಕುರಿತು ಮಾಹಿತಿ ಪಡೆಯುವ ಕ್ರಮವಾಗಿ ಪ್ರಧಾನಿ ಮೋದಿ ಈ ಭೇಟಿ ಹಮ್ಮಿಕೊಂಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.