ಉದ್ಯಮಿ ಗೌತಮ್ ಅದಾನಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರಗಳು
ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಚ್ಚಿಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅದಾನಿ ಅವರ ವಿಚಾರವಾಗಿ ದೇಶದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದ ಮೋದಿ, ವಿದೇಶದಲ್ಲಿ ನಿಂತು 'ವೈಯಕ್ತಿಕ ವಿಚಾರ' ಎನ್ನುತ್ತಾರೆ ಎಂದು ದೂರಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಹಿಂದಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, 'ನೀವು ದೇಶದಲ್ಲಿ (ಭಾರತದಲ್ಲಿ) ಪ್ರಶ್ನೆಗಳನ್ನು ಕೇಳಿದರೆ, ಮೌನ ವಹಿಸುತ್ತಾರೆ. ಆದರೆ, ವಿದೇಶದಲ್ಲಿ ಕೇಳಿದರೆ, ವೈಯಕ್ತಿಕ ವಿಚಾರ ಎನ್ನುತ್ತಾರೆ. ಮೋದಿ ಅವರು ಅಮೆರಿಕದಲ್ಲಿಯೂ ಅದಾನಿ ಅವರ ಭ್ರಷ್ಟಾಚಾರವನ್ನು ಮುಚ್ಚಿಹಾಕುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
ಹಾಗೆಯೇ, 'ಮಿತ್ರರ ಜೇಬು ತುಂಬಿಸುವುದೇ ಮೋದಿ ಅವರಿಗೆ 'ರಾಷ್ಟ್ರ ನಿರ್ಮಾಣ' ಕಾರ್ಯವಾಗಿರುವಾಗ, ಲಂಚ ಪಡೆದು ದೇಶದ ಸಂಪತ್ತನ್ನು ಲೂಟಿ ಮಾಡುವುದು 'ವೈಯಕ್ತಿಕ ವಿಚಾರ' ಆಗುತ್ತದೆ' ಎಂದು ಕಿಡಿಕಾರಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಮೋದಿ, ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಗುರುವಾರ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರ ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಮೋದಿ ಪ್ರತಿಕ್ರಿಯಿಸಿರುವ ಮೋದಿ, 'ಮೊದಲಿಗೆ ಭಾರತ ಪ್ರಜಾಪ್ರಭುತ್ವ ದೇಶ. 'ವಸುದೈವ ಕುಟುಂಬಕಮ್' ಎಂಬುದು ನಮ್ಮ ಸಂಸ್ಕೃತಿ, ಚಿಂತನೆ. ಇಡೀ ಜಗತ್ತು ಒಂದು ಕುಟುಂಬ ಎಂಬುದು ಅದರ ಅರ್ಥ' ಎಂದು ಹೇಳಿದ್ದಾರೆ. ಆ ಮೂಲಕ, ಎರಡೂ ರಾಷ್ಟ್ರಗಳ ಬಾಂಧವ್ಯವನ್ನು ಪ್ರತಿಪಾದಿಸಿದ್ದಾರೆ.
ಮುಂದುವರಿದು, 'ಪ್ರತಿಯೊಬ್ಬ ಭಾರತೀಯನೂ ನನ್ನ ಸ್ವಂತ ಕುಟುಂಬದ ಸದಸ್ಯ. ಆದರೆ, ಅಂತಹ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ, ಎರಡು ರಾಷ್ಟ್ರಗಳ ನಾಯಕರು ಒಟ್ಟಿಗೆ ಸೇರುವುದಿಲ್ಲ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವುದಿಲ್ಲ' ಎಂದು ಹೇಳಿದ್ದಾರೆ. ಆ ಮೂಲಕ ಅದಾನಿ ವಿಚಾರದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಹೂಡಿಕೆದಾರರನ್ನು ವಂಚಿಸಲು ಭಾರತದ ಅಧಿಕಾರಿಗಳಿಗೆ ಭಾರಿ ಪ್ರಮಾಣದ ಲಂಚ ನೀಡಿದ ಆರೋಪ ಉದ್ಯಮಿ ಅದಾನಿ ಅವರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.