ADVERTISEMENT

ದಂಗೆ, ಸುಲಿಗೆಗಳಿಂದ ಉತ್ತರ ಪ್ರದೇಶಕ್ಕೆ ಮುಕ್ತಿ ಕೊಡಿಸಿದ ಬಿಜೆಪಿ: ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2022, 11:47 IST
Last Updated 20 ಫೆಬ್ರುವರಿ 2022, 11:47 IST
ಪ್ರಧಾನಿ ನರೇಂದ್ರ ಮೋದಿ - ಪಿಟಿಐ ಸಂಗ್ರಹ ಚಿತ್ರ
ಪ್ರಧಾನಿ ನರೇಂದ್ರ ಮೋದಿ - ಪಿಟಿಐ ಸಂಗ್ರಹ ಚಿತ್ರ   

ಉನ್ನಾವೊ: ದಂಗೆಗಳು, ಕರ್ಫ್ಯೂಗಳು ವ್ಯಾಪಾರಿಗಳ ಮತ್ತು ಉದ್ಯಮಿಗಳ ಜೀವನವನ್ನು ಸಂಕಷ್ಟಕ್ಕೀಡು ಮಾಡಿದ್ದವು. ಈ ಕತ್ತಲ ಕೂಪದಿಂದ ಉತ್ತರ ಪ್ರದೇಶವನ್ನು ಬಿಜೆಪಿ ಸರ್ಕಾರವು ಹೊರತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಉತ್ತರ ಪ್ರದೇಶದ ಉನ್ನಾವೊದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕುಟುಂಬಸ್ಥರ ವೈಭವದ ಅಧಿಕಾರವಿದ್ದಾಗ ಘೋರ ಅಪರಾಧ ಪ್ರಕರಣಗಳ ಆರೋಪಿಗಳು ಮತ್ತು ಮಾಫಿಯಾಗಳು ಸಚಿವ ಸಂಪುಟದ ಭಾಗವಾಗಿದ್ದರು. ಮಾಫಿಯಾಗಳು ಆಡಳಿತದ ಮೇಲೆ ನೇರ ಪರಿಣಾಮ ಬೀರುತ್ತಿದ್ದರು. ಉತ್ತರ ಪ್ರದೇಶದ ಜನರಿಗೆ ಪ್ರಯೋಜನವಾಗುವುದು ಅವರಿಗೆ ಬೇಕಿರಲಿಲ್ಲ. ತಾವು ಅಧಿಕಾರದಲ್ಲಿ ಇರಬೇಕು ಎಂಬುದಷ್ಟೇ ಅವರ ಗುರಿಯಾಗಿತ್ತು’ ಎಂದು ಸಮಾಜವಾದಿ ಪಕ್ಷವನ್ನು ಉದ್ದೇಶಿಸಿ ಪರೋಕ್ಷವಾಗಿ ಟೀಕಿಸಿದ್ದಾರೆ.

2017ರ ಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದಾರೆ. 2022ರ ಚುನಾವಣೆಯಲ್ಲಿಯೂ ಸೋಲಲಿದ್ದಾರೆ. ಆದರೂ ಅವರು (ಸಮಾಜವಾದಿ ಪಕ್ಷದ ನಾಯಕರು) ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. ಆದರೆ ಜನ ಅವರನ್ನು ಮತ್ತೆ ತಿರಸ್ಕರಿಸಲಿದ್ದು, ಯೋಗಿ ಜೀ ಅವರನ್ನು ಮರಳಿ ಗದ್ದುಗೆಗೆ ಏರಿಸಲಿದ್ದಾರೆ. ಮೊದಲ ಎರಡು ಹಂತದ ಚುನಾವಣೆಗಳಲ್ಲಿ ಅವರಿಗೆ ಸೋಲಾಗಿದೆ. ಆದರೂ ಅವರು ನಿದ್ರಿಸುವಾಗಲೆಲ್ಲ ಮರಳಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಒಸಾಮಾ ಬಿನ್ ಲಾಡೆನ್‌ನಂಥ ಉಗ್ರನನ್ನು ಅವರು ‘ಜೀ’ ಎಂದು ಗೌರವದಿಂದ ಸಂಬೋಧಿಸುತ್ತಾರೆ. ಆದರೆ, ನಮ್ಮ ಸೇನೆ, ಪೊಲೀಸರನ್ನು ಅಗೌರವದಿಂದ ಕಾಣುತ್ತಾರೆ’ ಎಂದು ಪ್ರಧಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಯೋಗಿ ಅವರ ಸಾಧನೆ ಎಸ್‌ಪಿ, ಬಿಎಸ್‌‍ಪಿಯನ್ನು ಮೀರಿಸಿದೆ. ಎಸ್‌ಪಿ, ಬಿಎಸ್‌‍ಪಿ ಸರ್ಕಾರಗಳು 10 ವರ್ಷಗಳಲ್ಲಿ ಸಾಧಿಸದ್ದನ್ನು ಯೋಗಿ ಸಾಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.