ADVERTISEMENT

ಕಲಬುರಗಿಯಲ್ಲಿ ಆಗಿರುವ ಕೆಲಸ ನೋಡಿ: ಖರ್ಗೆಗೆ ರಾಜ್ಯಸಭೆಯಲ್ಲಿ ಮೋದಿ ಉತ್ತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2023, 11:56 IST
Last Updated 9 ಫೆಬ್ರುವರಿ 2023, 11:56 IST
   

ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗೌತಮ್ ಅದಾನಿ ಅವರ ಸಂಪತ್ತು ಬೃಹತ್ ಪ್ರಮಾಣದಲ್ಲಿ ಹೆಚ್ಚಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿದ ಆರೋಪಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಮೋದಿ, ನಾನು ಪದೇ ಪದೇ ಕಲಬುರಗಿಗೆ ಭೇಟಿ ನೀಡುತ್ತೇನೆ ಎಂದು ಖರ್ಗೆಯವರು ಹೇಳುತ್ತಾರೆ. ಅಲ್ಲಿ ಆಗಿರುವ ಕೆಲಸದ ಬಗ್ಗೆ ಅವರು ಗಮನ ಹರಿಸಬೇಕು. ಕಲಬುರಗಿಯಲ್ಲಿ 8 ಲಕ್ಷ ಸೇರಿದಂತೆ ಕರ್ನಾಟಕದಲ್ಲಿ 1.70 ಕೋಟಿ ಜನ್‌ಧನ್ ಖಾತೆಗಳನ್ನು ತೆರೆಯಲಾಗಿದೆ. ಇದರಿಂದ ಹಲವರ ಸಬಲೀಕರಣ ಸಾಧ್ಯವಾಗಿದೆ. ಮತ್ತೆ ಕೆಲವು ಖಾತೆಗಳು ಬಂದ್ ಆಗಿರುವುದರಿಂದ ಜನ ನೋವಿನಲ್ಲಿರುವುದು ನನಗೆ ಅರ್ಥವಾಗುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಸಾಮಾನ್ಯ ಜನ ನಮ್ಮ ಆದ್ಯತೆ. ಹೀಗಾಗಿಯೇ 25 ಕೋಟಿ ಜನರಿಗೆ ಎಲ್‌ಪಿಜಿ ಸಂಪರ್ಕ ನೀಡಿದ್ದೇವೆ. ಕಾಂಗ್ರೆಸ್ಸಿಗರು ಸದಾ ಗರೀಬಿ ಹಠಾವೊ ಎಂದು ಹೇಳುತ್ತಿರುತ್ತಾರೆ. ಆದರೆ, 4 ದಶಕಗಳಿಂದ ಅವರು ಅದನ್ನು ಮಾಡಿಲ್ಲ. ಆದರೆ, ನಾವು ದೇಶದ ಜನರ ಆಶಯ ಮತ್ತು ನಿರೀಕ್ಷೆಯನ್ನು ತಲುಪಲು ಕಠಿಣ ಪರಿಶ್ರಮ ಹಾಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಅರ್ಹ ಎಲ್ಲ ಫಲಾನುಭವಿಗಳಿಗೂ ಸರ್ಕಾರದ ಯೋಜನೆಗಳ ಅನುಕೂಲ ಸಿಗುವಂತೆ ಮಾಡುವುದು ನಿಜವಾದ ಜಾತ್ಯತೀತತೆ ಎಂದು ಮೋದಿ ಪ್ರತಿಪಾದಿಸಿದರು.

‘ನಾ ಖಾವುಂಗಾ. ನಾ ಖಾನೆದೂಂಗಾ’ ಎಂದು ಮೋದಿ ಅವರು 2014ರಲ್ಲಿ ಹೇಳಿದ್ದರು. ಇದು ಪೊಳ್ಳು ಭರವಸೆಯೇ. ಮೋದಿ ಅವರ ಆಪ್ತ ಸ್ನೇಹಿತನ ಸಂಪತ್ತು 13 ಪಟ್ಟು ಹೆಚ್ಚಿದೆ. 2019ರಲ್ಲಿ ₹1 ಲಕ್ಷ ಕೋಟಿಯಷ್ಟಿದ್ದ ಸಂಪತ್ತು ₹12 ಲಕ್ಷ ಕೋಟಿಗೆ ಏರಿದ್ದು ಹೇಗೆ? ಎರಡು ವರ್ಷದಲ್ಲಿ ಅದ್ಯಾವ ಪವಾಡ ನಡೆಯಿತು. ಇದು ಗೆಳೆತನದ ಫಲವೇ’ ಎಂದು ಅದಾನಿ ಹೆಸರು ಪ್ರಸ್ತಾ‍ಪಿಸದೆ ಖರ್ಗೆ ಬುಧವಾರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.