ADVERTISEMENT

ಯುಪಿಎ ಸರ್ಕಾರದ ನೀತಿ, ದುರುದ್ದೇಶದಿಂದ ಬಡವರಿಗೆ ಸಂಕಷ್ಟ: ಮೋದಿ

ಪಿಟಿಐ
Published 20 ಜನವರಿ 2021, 14:44 IST
Last Updated 20 ಜನವರಿ 2021, 14:44 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಲಖನೌ: ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಆ ಸರ್ಕಾರದ ತಪ್ಪು ನೀತಿಗಳು ಹಾಗೂ ದುರುದ್ದೇಶದಿಂದಾಗಿ ಬಡವರು ಸಂಕಷ್ಟ ಅನುಭವಿಸಿದ್ದರು’ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ 6.1 ಲಕ್ಷ ಫಲಾನುಭವಿಗಳಿಗೆ ₹2,691 ಕೋಟಿ ಆರ್ಥಿಕ ನೆರವು ಬಿಡುಗಡೆಗೊಳಿಸಿದ ಮೋದಿ, ‘ತಮಗೊಂದು ಸೂರು ನಿರ್ಮಾಣ ಮಾಡಲು ಸರ್ಕಾರ ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಈ ಹಿಂದೆ ಜನರಿಗೆ ಇರಲಿಲ್ಲ. 2016ರಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಪ್ರಾರಂಭವಾದಾಗ ಇದರ ಲಾಭವನ್ನು ಪಡೆಯಲು ಅಂದು ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ಸಮಾಜವಾದಿ ಪಕ್ಷವು ಸಂಪೂರ್ಣ ವಿಫಲವಾಗಿತ್ತು’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರವು ಹಲವು ಬಾರಿ ಮನವಿ ಮಾಡಿದರೂ, ಅಂದು ಆಡಳಿತದಲ್ಲಿದ್ದ ಸಮಾಜವಾದಿ ಪಕ್ಷವು ಫಲಾನುಭವಿಗಳ ಪಟ್ಟಿಯನ್ನೇ ಕಳುಹಿಸಿಕೊಟ್ಟಿರಲಿಲ್ಲ. ನಾವು ಹಣಕಾಸು ನೆರವು ನೀಡಲು ತಯಾರಿದ್ದೆವು. ಆದರೆ ನಮ್ಮ ಮನವಿ, ಪತ್ರಗಳನ್ನು ಸರ್ಕಾರವು ನಿರ್ಲಕ್ಷಿಸಿತ್ತು. ಅಂದಿನ ಸರ್ಕಾರದ ಈ ನಡೆಯನ್ನು ಬಡಜನರು ಇನ್ನೂ ಮರೆತಿಲ್ಲ’ ಎಂದರು. ‘ಯೋಗಿ ಆದಿತ್ಯನಾಥ್‌ ಅವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದು, ಕೇಂದ್ರದ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸುವ ಮುಖಾಂತರ ರಾಜ್ಯಕ್ಕೆ ಹೊಸ ಗುರುತು ನೀಡಿದ್ದಾರೆ’ ಎಂದರು.

ADVERTISEMENT

ಇದೇ ವೇಳೆ ಚಿತ್ರಕೂಟ, ವಾರಾಣಸಿ, ಅಯೋಧ್ಯೆ ಸೇರಿದಂತೆ ಹಲವು ಜಿಲ್ಲೆಗಳ ಫಲಾನುಭವಿಗಳ ಜೊತೆ ವಿಡಿಯೊ ಕಾನ್ಫರೆನ್ಸ್‌ ಮುಖಾಂತರವೇ ಮೋದಿ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.