ನವದೆಹಲಿ: ರೈತರ ಮೇಲೆ ದಾಳಿ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ಭಾರತವನ್ನೇ ದುರ್ಬಲಗೊಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ದೆಹಲಿ ಗಡಿ ಪ್ರದೇಶಗಳಲ್ಲಿ ಕಳೆದೆರಡು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್ನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು.
ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಆರೋಪಗಳನ್ನು ಹೊರಿಸುತ್ತಿದೆ. ಅಲ್ಲದೆ ರೈತರ ಒಗ್ಗಟ್ಟನ್ನು ಮುರಿಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ರೈತರು ಹಾಗೂ ಕಾರ್ಮಿಕರ ಮೇಲೆ ದಾಳಿ ಮಾಡಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ. ಇದರಿಂದ ದೇಶವಿರೋಧಿ ಶಕ್ತಿಗಳಿಗೆ ಲಾಭವಾಗಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು.
ಕೆಂಪುಕೋಟೆಗೆ ರೈತರು ಪ್ರವೇಶಿಸಲು ಏಕೆ ಅವಕಾಶ ಮಾಡಿಕೊಡಲಾಯಿತು? ಅದನ್ನು ಯಾಕೆತಡೆಯಲಿಲ್ಲ? ಕೆಂಪು ಕೋಟೆ ಆವರಣದೊಳಗೆ ಬಿಡುವ ಉದ್ದೇಶವಾದರೂ ಏನಾಗಿತ್ತು? ಗೃಹ ಸಚಿವರನ್ನೇ ಕೇಳಿ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಸರ್ಕಾರ ರೈತರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸಿ ಅದನ್ನು ಕಸದ ಬುಟ್ಟಿಗೆ ಎಸೆಯುವುದೇಪರಿಹಾರ. ರೈತರು ಮನೆಗೆ ಹೋಗುತ್ತಾರೆ ಎಂದು ಸರ್ಕಾರ ಭಾವಿಸಬಾರದು. ಈ ಆಂದೋಲನ ಮತ್ತಷ್ಟು ವ್ಯಾಪಿಸಲಿದೆ. ಆದರೆ ಅದನ್ನು ನಾವು ಬಯಸುವುದಿಲ್ಲ. ನಮಗೆ ಪರಿಹಾರ ಬೇಕಾಗಿದೆ ಎಂದು ಹೇಳಿದರು.
ಈ ಮೊದಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ವಾಗ್ದಾಳಿ ನಡೆಸಿದರು. ದೇಶದ ರಾಜಧಾನಿ ರೈತರ ನಂಬಿಕೆಯಾಗಿದೆ. ಅವರ ನಂಬಿಕೆಯನ್ನು ಮುರಿಯುವುದು ಅಪರಾಧ. ಅವರ ಧ್ವನಿಯನ್ನು ಆಲಿಸದಿರುವುದು ಪಾಪ. ರೈತರ ಮೇಲಿನ ದಾಳಿ ದೇಶದ ಮೇಲಿನ ದಾಳಿಯಾಗಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.