
ನವದೆಹಲಿ: ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮುನ್ನವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿತ್ತು ಎಂಬ ದೂರು ರಾಜಕೀಯ ಪ್ರೇರಿತವಾದುದು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ದೆಹಲಿ ನ್ಯಾಯಾಲಯಕ್ಕೆ ಶನಿವಾರ ಹೇಳಿಕೆ ಸಲ್ಲಿಸಿದ್ದಾರೆ.
ಈ ಆರೋಪದ ಬಗ್ಗೆ ತನಿಖೆ ನಡೆಸಲು ನಿರಾಕರಿಸಿದ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ 2025ರ ಸೆ.11ರಂದು ಸಲ್ಲಿಸಲಾಗಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶ ವಿಶಾಲ್ ಗೊಗನೆ ಅವರ ಮುಂದೆ ಈ ಹೇಳಿಕೆ ಸಲ್ಲಿಸಲಾಗಿದೆ.
ಸೋನಿಯಾ ಗಾಂಧಿ ಅವರ ಪರ ವಕೀಲರ ತಂಡವು ಹೇಳಿಕೆ ಸಲ್ಲಿಸಿದ ಬಳಿಕ, ಫೆ.21ರಂದು ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯವು ಪ್ರಕಟಿಸಿತು.
ರೂಸ್ ಅವೆನ್ಯೂ ನ್ಯಾಯಾಲಯಗಳ ಸೆಂಟ್ರಲ್ ದೆಹಲಿ ಕೋರ್ಟ್ ಬಾರ್ ಅಸೋಸಿಯೇಷನ್ನ ಉಪಾಧ್ಯಕ್ಷ, ವಕೀಲ ವಿಕಾಸ್ ತ್ರಿಪಾಠಿ ಸಲ್ಲಿಸಿದ್ದ ದೂರನ್ನು ಮ್ಯಾಜಿಸ್ಟೀರಿಯಲ್ ನ್ಯಾಯಾಲಯ ವಜಾಗೊಳಿಸಿತ್ತು.
ವಕೀಲರಾದ ತರನ್ನುಮ್ ಚೀಮಾ, ಕನಿಷ್ಕಾ ಸಿಂಗ್, ಆಕಾಶ್ ಸಿಂಗ್ ಅವರು ಸೋನಿಯಾ ಗಾಂಧಿ ಪರ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿದರು. ಇದು ತಪ್ಪು ಕಲ್ಪನೆಯ ಆರೋಪ. ಕ್ಷುಲ್ಲಕ, ರಾಜಕೀಯ ಪ್ರೇರಿತ ಮತ್ತು ಕಾನೂನಿನ ಪ್ರಕ್ರಿಯೆಯ ದುರುಪಯೋಗ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.