ನವದೆಹಲಿ: ಉಚಿತ ಕೊಡುಗೆಗಳ ಮೇಲಿನ ರಾಜಕೀಯ ಮತ್ತು ಅವುಗಳ ಬಗ್ಗೆ ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಒಲವು ಯೋಜನಾ ವೆಚ್ಚಗಳ ಆದ್ಯತೆಯ ದಿಕ್ಕನ್ನೇ ಬದಲಿಸುತ್ತಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾನುವಾರ ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಿಸೆಯ ಸಬಲೀಕರಣ ಅಲ್ಲ, ಮನುಷ್ಯನ ಮನಸ್ಸಿನ ಸಬಲೀಕರಣವಾಗಬೇಕಾದ ಅಗತ್ಯವಿದೆ ಎಂದೂ ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಮಾನವ ಹಕ್ಕುಗಳ ದಿನದ ಅಂಗವಾಗಿ ಭಾರತ ಮಂಟಪಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಮಾನವ ಹಕ್ಕುಗಳು ಅನುಷ್ಠಾನಗೊಳ್ಳುತ್ತಿರುವಂತೆ ಜಗತ್ತಿನ ಬೇರೆ ಯಾವ ಭಾಗದಲ್ಲೂ ಅನುಷ್ಠಾನಗೊಂಡಿಲ್ಲ’ ಎಂದು ಅಭಿಪ್ರಾಯಪಟ್ಟರು.
ದೀರ್ಘಾವಧಿಯಲ್ಲಿ ಆರ್ಥಿಕತೆ ಜೀವನ ಗುಣಮಟ್ಟ ಮತ್ತು ಸಾಮಾಜಿಕ ಒಗ್ಗಟ್ಟಿನ ಮೇಲೆ ಉಚಿತ ಕೊಡುಗೆಗಳು ಎಷ್ಟು ಪರಿಣಾಮ ಬೀರಲಿವೆ ಎಂಬ ಬಗ್ಗೆ ಆರೋಗ್ಯಕರ ರಾಷ್ಟ್ರೀಯ ಚರ್ಚೆ ನಡೆಯಬೇಕಿದೆ.ಜಗದೀಪ್ ಧನಕರ್, ಉಪರಾಷ್ಟ್ರಪತಿ
‘ಕಾಕತಾಳೀಯ ಎಂಬಂತೆ ಮಾನವ ಹಕ್ಕುಗಳು ಘೋಷಣೆಯಾಗಿ 75 ವರ್ಷಗಳು ಪೂರ್ಣಗೊಂಡಿರುವ ಸುಸಂದರ್ಭದಲ್ಲಿಯೇ ಭಾರತ ಸಹ ‘ಅಮೃತ ಕಾಲ’ದ ಘೋಷಣೆ ಮಾಡಿದೆ. ಇಲ್ಲಿ ಮಾನವ ಹಕ್ಕುಗಳು ಮತ್ತು ಅದರ ಮೌಲ್ಯಗಳು ಸಮೃದ್ಧವಾಗಿರುವುದರಿಂದ ‘ಅಮೃತ ಕಾಲ’ವು ನಮ್ಮ ‘ಗೌರವ ಕಾಲವಾಗಲಿದೆ’ ಎಂದು ಹೇಳಿದರು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಿಂದ ಸಂದೇಶ ಸ್ವೀಕರಿಸಲು ಇದು ಸರಿಯಾದ ವೇದಿಕೆ. ಮಾನವ ಹಕ್ಕುಗಳ ಉತ್ತೇಜನಕ್ಕಾಗಿ ಭಾರತದಲ್ಲಿ ಕೈಗೊಂಡಿರುವ ಬೃಹತ್, ಕ್ರಾಂತಿಕಾರಿ, ಸಕಾರಾತ್ಮಕ ಬದಲಾವಣೆಗಳನ್ನು ಗಮನಿಸಲೂ ಇದು ಸೂಕ್ತ ಸಮಯ. ಭಾರತದಲ್ಲಿ ಮಾನವ ಹಕ್ಕುಗಳು ಅರಳಿರುವಂತೆ, ಸಮೃದ್ಧವಾಗಿರುವಂತೆ ಜಗತ್ತಿನ ಯಾವ ಭಾಗಗಳಲ್ಲೂ ಸಮೃದ್ಧವಾಗಿಲ್ಲ ಎಂದು ತಿಳಿಸಿದರು.
‘ಯಾರೂ ಕಾನೂನಿಗಿಂತ ಮೇಲಲ್ಲ. ನಾವು ಅದಕ್ಕಿಂತ ಮೇಲ್ಪಟ್ಟವರು ಎಂದುಕೊಂಡರೂ ಎಂದಿಗೂ ಕಾನೂನೇ ಅತೀತವಾಗಿತ್ತದೆ ಎಂಬುದು ದೇಶದಲ್ಲಿರುವ ಹೊಸ ಕಾನೂನು. ಇದು ಉನ್ನತ ಬದಲಾವಣೆಯ ಮಾದರಿ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.